ಬೆಂಗಳೂರು: ‘ಕೇಂದ್ರ ಸರ್ಕಾರ ವರ್ಷಕ್ಕೆ ₹2.50 ಸಾವಿರ ಕೋಟಿ ಸೆಸ್ ಸಂಗ್ರಹಿಸುತ್ತಿದ್ದರೂ, ಅದರ ಹಂಚಿಕೆಯಲ್ಲಿ ಕರ್ನಾಟಕದಂತಹ ಅಭಿವೃದ್ಧಿ ಪಥದಲ್ಲಿರುವ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಎಕ್ಸ್’ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು,‘ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕರ್ನಾಟಕದಂತಹ ರಾಜ್ಯಗಳು ತಮಗೆ ಬರಬೇಕಾದ ತೆರಿಗೆ ಪಾಲಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಹಾಕಬೇಕಾದ ಪ್ರಮೇಯ ಬರಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
'ತೆರಿಗೆ ಪಾವತಿಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣದಂತಹ ರಾಜ್ಯಗಳು ಮುಂಚೂಣಿಯಲ್ಲಿವೆ. ಆದರೆ, ಅದಕ್ಕೆ ಪ್ರತಿಯಾಗಿ ಕೇಂದ್ರದಿಂದ ಈ ರಾಜ್ಯಗಳಿಗೆ ್ಯಾಯೋಚಿತ ಪಾಲು ಬರುತ್ತಿಲ್ಲ. ಉತ್ತರಪ್ರದೇಶ, ಬಿಹಾರದಂತಹ ರಾಜ್ಯಗಳಿಗೆ ಬದಲಿಗೆ ಹೆಚ್ಚಿನ ಪಾಲು ಹೋಗುತ್ತಿದೆ. ಇದು ಖಂಡಿತವಾಗಿಯೂ ಪ್ರಶ್ನಾರ್ಹ’ ಎಂದಿದ್ದಾರೆ.
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇತರರಿಗೆ ಇದನ್ನು ಟ್ಯಾಗ್ ಮಾಡಿದ್ದಾರೆ.
‘ಕರ್ನಾಟಕದಲ್ಲಿ ನೆಗೆಟಿವ್ ರೇಟಿಂಗ್’
‘ಕರ್ನಾಟಕದಲ್ಲಿ ಈಗ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಇಲ್ಲ. ನೆಗೆಟಿವ್ ರೇಟಿಂಗ್ ಇದೆ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಭೂಮಿ ಸಿಗುತ್ತಿಲ್ಲ. ಸರ್ಕಾರ ನೀರು ಕೊಡುತ್ತಿಲ್ಲ, ವಿದ್ಯುತ್ ದರವೂ ಹೆಚ್ಚು. ಉದ್ಯಮ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.
‘ಪೂರಕ ವಾತಾವರಣ ಸೃಷ್ಟಿಸುವುದರ ಬದಲು ಇರುವವರ ಕತ್ತನ್ನೇ ಕುಯ್ದು ಅವರೂ ಇರಲಾಗದ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದು ಕಾಂಗ್ರೆಸ್ನ ಆಡಳಿತ ವೈಖರಿ. ಇದರಿಂದಾಗಿ ಬಿಲ್ದರ್ಗಳು, ಉದ್ಯಮಿಗಳು ರಾಜ್ಯವನ್ನು ತೊರೆಯುವಂತಾಗಿದೆ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.