ADVERTISEMENT

ಎಸ್‌ಇಪಿಯಲ್ಲಿ ಕನ್ನಡಕ್ಕೆ ಅನ್ಯಾಯ - ಸರಿಪಡಿಸಲು ಬರಗೂರು ರಾಮಚಂದ್ರಪ್ಪ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2024, 10:45 IST
Last Updated 25 ಜೂನ್ 2024, 10:45 IST
   

ಬೆಂಗಳೂರು: ರಾಜ್ಯ ಶಿಕ್ಷಣ ನೀತಿಯಲ್ಲಿ (ಎಸ್‌ಇಪಿ) ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಪ್ರೊ.ಬರಗೂರು ರಾಮಚಂದ್ರಪ್ಪ ಮನವಿ ಮಾಡಿದ್ದಾರೆ. ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

'ಕೇಂದ್ರ ಸರ್ಕಾರದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಬದಲಾಗಿ ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ನಿರ್ಧರಿಸಿ ಸಮಿತಿಯನ್ನೂ ರಚಿಸಿದೆ. ಈ ಸಮಿತಿಯ ಮಧ್ಯಂತರ ವರದಿಯ ಪ್ರಕಾರ ಮೊದಲಿನಂತೆ ಮೂರು ವರ್ಷದ ಪದವಿ ಶಿಕ್ಷಣವನ್ನು ಮರು ಜಾರಿ ಮಾಡಲು ನಿರ್ಧರಿಸಿದೆ. ಇದು ಸರಿಯಾದ ಕ್ರಮವಾದರೂ ಗೊಂದಲಗಳು ಮುಂದುವರೆದಿವೆ ಎನ್ನುವುದು ಅನೇಕ ಅಧ್ಯಾಪಕರ ಅಭಿಪ್ರಾಯವಾಗಿದೆ. ಕನ್ನಡಕ್ಕೆ ಸಂಬಂಧಪಟ್ಟಂತೆ ನನ್ನ ಗಮನಕ್ಕೆ ಬಂದ ಒಂದು ಅಂಶದ ಬಗ್ಗೆ ನಿಮ್ಮ ಗಮನ ಮತ್ತು ಸೂಕ್ತ ಕ್ರಮವನ್ನು ನಾನು ನಿರೀಕ್ಷಿಸುತ್ತೇನೆ'.

ADVERTISEMENT

'8-5-2024ರ ಸರ್ಕಾರದ ಆದೇಶ ಮತ್ತು 5-06-2024 ರಂದು ಜರುಗಿದ ಪಠ್ಯಕ್ರಮ ವಿನ್ಯಾಸದ ಸಮಿತಿಯ ವರದಿಯಂತೆ ವಿವಿಧ ವಿಶ್ವವಿದ್ಯಾಲಯಗಳು ಪದವಿಯ ಮೊದಲ ಎರಡು ಸೆಮಿಸ್ಟರ್‌ಗಳಿಗೆ ಅಂದರೆ ಒಂದು ವರ್ಷಕ್ಕೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿ ಬೋಧನಾ ಅವಧಿಯನ್ನು ನಿಗದಿಗೊಳಿಸಿವೆ. ಈ ಪ್ರಕಾರ ಕೆಲವು ವಿಶ್ವವಿದ್ಯಾಲಯಗಳು ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳಿಗೆ ವಾರಕ್ಕೆ ಕೇವಲ ಮೂರು ಗಂಟೆಗಳನ್ನು ನಿಗದಿಮಾಡಿರುವುದು ಅನ್ಯಾಯ'.

'ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ಕನ್ನಡವನ್ನು ಮೊದಲಿಗೆ ಎರಡು ಸೆಮಿಸ್ಟರ್‌ಗಳಿಗೆ ಮಾತ್ರ ಸೀಮಿತಗೊಳಿಸಿದಾಗ ನನ್ನನ್ನೂ ಒಳಗೊಂಡಂತೆ ಅನೇಕರ ಪ್ರತಿರೋಧಕ್ಕೆ ಒಪ್ಪಿ ನಾಲ್ಕು ಸೆಮಿಸ್ಟರ್‌ಗಳಿಗೆ ವಿಸ್ತರಿಸಿದ್ದು ಅಲ್ಲದೆ, ಪ್ರತಿ ಸೆಮಿಸ್ಟ‌ರ್ ನಾಲ್ಕು ಗಂಟೆಗಳ ಬೋಧನಾವಧಿ ನಿಗದಿಯಾಗಿತ್ತು. ಎಸ್‌ಇಪಿಯಲ್ಲಿ ಕನ್ನಡಕ್ಕೆ ಇದ್ದ ಪ್ರತಿ ಸೆಮಿಸ್ಟರ್‌ನ ನಾಲ್ಕು ಗಂಟೆಗಳ ಬೋಧನಾವಧಿಯನ್ನು ಎಸ್.ಇ.ಪಿ.ಯಲ್ಲಿ ಕೆಲವು ವಿಶ್ವವಿದ್ಯಾಲಯಗಳು ಮೂರು ಗಂಟೆಗೆ ಇಳಿಸಿರುವುದು ಅನ್ಯಾಯವಲ್ಲದೆ ಬೇರೇನೂ ಅಲ್ಲ. ಎನ್.ಇ.ಪಿ.ಯಲ್ಲಿದ್ದ ಬೋಧನಾವಧಿಯನ್ನು ಕಡಿತ ಮಾಡಲು ಕಾರಣಗಳೇ ಇಲ್ಲ. ಈ ಅನ್ಯಾಯವನ್ನು ಕೂಡಲೇ ಸರಿಮಾಡಿ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಕನ್ನಡವನ್ನು ಪ್ರತಿ ಸೆಮಿಸ್ಟರ್‌ನಲ್ಲಿ ವಾರಕ್ಕೆ ನಾಲ್ಕು ಗಂಟೆ ಬೋಧಿಸುವಂತೆ ನಿರ್ದೇಶನ ನೀಡಬೇಕೆಂದು ಒತ್ತಾಯಪೂರ್ವಕವಾಗಿ ವಿನಂತಿಸುತ್ತೇನೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.