ADVERTISEMENT

ಮುಸ್ಲಿಮರ ಬಗ್ಗೆ ನ್ಯಾಯಮೂರ್ತಿ ಹೇಳಿಕೆ ಆಘಾತಕಾರಿ: ಜಾಗೃತ ನಾಗರಿಕರು ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 0:06 IST
Last Updated 21 ಸೆಪ್ಟೆಂಬರ್ 2024, 0:06 IST
<div class="paragraphs"><p>ನ್ಯಾಯಮೂರ್ತಿ ವೇದವ್ಯಾಸಾಚಾರ್  ಶ್ರೀಶಾನಂದ</p></div>

ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನಗರದ ಮುಸ್ಲಿಂ ಸಮುದಾಯ ಹೆಚ್ಚಾಗಿ ಇರುವ ಸ್ಥಳವನ್ನು ಭಾರತವಲ್ಲ ಪಾಕಿಸ್ತಾನ ಎಂದು ಹೈಕೋರ್ಟ್‌ ನ್ಯಾಯಮೂರ್ತಿಯವರು ಹೇಳಿದ್ದಾರೆ ಎಂದು ವರದಿಯಾಗಿರುವುದು ಆಘಾತ ಉಂಟುಮಾಡಿದೆ’ ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಹೇಳಿದೆ.

ADVERTISEMENT

ಜಾಗೃತ ನಾಗರಿಕರು ಕರ್ನಾಟಕದ ಕೆ. ಮರುಳ ಸಿದ್ಧಪ್ಪ, ಜಿ. ರಾಮಕೃಷ್ಣ, ಎಸ್. ಜಿ. ಸಿದ್ದರಾಮಯ್ಯ, ರುದ್ರಪ್ಪ ಹನಗವಾಡಿ, ಬಿ. ಶ್ರೀಪಾದ ಭಟ್, ಮೀನಾಕ್ಷಿ ಬಾಳಿ, ಕೆ. ಎಸ್. ವಿಮಲ, ಎನ್.ಗಾಯತ್ರಿ, ಟಿ. ಸುರೇಂದ್ರ ರಾವ್, ವಸಂತ್ ರಾಜ್ ಎನ್.ಕೆ., ವಾಸುದೇವ ಉಚ್ಚಿಲ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಇಂದಿರಾ ಕೃಷ್ಣಪ್ಪ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

‘ಸರ್ವ ಧರ್ಮ ಸಮಭಾವದ ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶ ನಮ್ಮದು. ಈಗಾಗಲೇ ವಿವಿಧ ರೀತಿಯಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ನಡೆಸುವ ಹಲವು ದೌರ್ಜನ್ಯಗಳಿಗೆ ದೇಶ ಸಾಕ್ಷಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯಪೀಠದಿಂದ ಬರುವ ಇಂತಹ ಅಭಿಪ್ರಾಯಗಳು ಜನರ ಮಧ್ಯೆ ಸಾಮರಸ್ಯವನ್ನು ಹದಗೆಡಿಸಲು ಕಾರಣವಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ವೈಯಕ್ತಿಕ ‌ನೆಲೆಯಲ್ಲಿ ನಡೆಯ ಬೇಕಾದ ಪೂಜೆ, ಹಬ್ಬಗಳು ಸಾರ್ವಜನಿಕ ಪ್ರಚಾರ ಸಾಧನ ವಾಗುವುದು ಮತ್ತು ನ್ಯಾಯಾಂಗ ದಲ್ಲಿರುವವರು ರಾಜಕೀಯ ವ್ಯಕ್ತಿಗಳಿಂದ ದೂರ ಇರಬೇಕು ಎಂಬ ಸದಾಶಯಗಳ ಗಡಿ ಮೀರಿ ಪ್ರಧಾನ ಮಂತ್ರಿಯವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ ಮನೆಯ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ವಿಡಿಯೊ ಹಂಚಿಕೆ ಆಗಿದೆ. ಇವೆಲ್ಲವೂ ಬಹುತ್ವ ಭಾರತದ ಅಡಿಗಲ್ಲು ಸಡಿಲ ವಾಗುತ್ತಿದೆಯೇನೋ ಎಂಬ ಆತಂಕ ಹುಟ್ಟಿಸಿವೆ. ಇಂತಹ ಸ್ಥಿತಿ ಮರುಕಳಿಸದಂತೆ ಗಮನ ಹರಿಸುವುದು ಅಗತ್ಯವಿದೆ’ ಎಂದು ಅವರೆಲ್ಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.