ADVERTISEMENT

ಕನ್ನಡ ಶಾಲೆಗಳ ನಿರ್ಲಕ್ಷ್ಯ: ರಾಜ್ಯೋತ್ಸದಂದು ಕರಾಳ ದಿನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:39 IST
Last Updated 27 ಅಕ್ಟೋಬರ್ 2024, 15:39 IST
ಲೋಕೇಶ್ ತಾಳಿಕಟ್ಟೆ
ಲೋಕೇಶ್ ತಾಳಿಕಟ್ಟೆ   

ಬೆಂಗಳೂರು: ರಾಜ್ಯ ಸರ್ಕಾರ 1995‌ರ ನಂತರದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸದೆ ನಿರ್ಲಕ್ಷ್ಯಸಿದೆ ಎಂದು ಆರೋಪಿಸಿರುವ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ (ಕೃಪ), ರಾಜ್ಯೋತ್ಸವವನ್ನು ಕರಾಳ ದಿನವಾಗಿ ಆಚರಿಸಲು ನಿರ್ಧರಿಸಿದೆ.

ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ‘ಅನುದಾನಕ್ಕೆ ಒಳಪಡಿಸಲು ಆಗ್ರಹಿಸಿ 30 ವರ್ಷಗಳಿಂದ  ಹೋರಾಟ, ಧರಣಿ ಸತ್ಯಾಗ್ರಹ ನಡೆಸಿದರೂ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಆತ್ಮಹತ್ಯೆಯಂಥ ಅನೇಕ ಘಟನೆಗಳು ನಡೆದರೂ ಕನಿಷ್ಠ ಕರುಣೆ ತೋರಿಸದ ಸರ್ಕಾರದ ನಡೆ ಖಂಡನೀಯ’ ಎಂದರು.

‘ನವೆಂಬರ್ ತಿಂಗಳಲ್ಲಿ ಕನ್ನಡದ ನಾಡು ನುಡಿ ಕುರಿತು ಭಾಷಣ ಮಾಡುವ ನಾಯಕರು, ಕನ್ನಡ ಸಾಹಿತಿಗಳು, ಪ್ರಗತಿಪರ ಚಿಂತಕರಿಗೆ ನಮ್ಮ ಶಾಲೆಗಳ ಶಿಕ್ಷಕರು ಕಾಣಿಸುತ್ತಿಲ್ಲ. ಶಿಕ್ಷಕರು 30 ವರ್ಷಗಳಿಂದ ಕನ್ನಡ ಕಲಿಸಿ, ಬಿಡಿಗಾಸು ಪಡೆಯದೆ ನಿವೃತ್ತಿ ಹೊಂದುತ್ತಿದ್ದಾರೆ. ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸದ ಸರ್ಕಾರದ ನಡೆಯನ್ನು ಖಂಡಿಸಿ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕನ್ನಡ ರಾಜ್ಯೋತ್ಸವದಂದು ಕಪ್ಪು ಪಟ್ಟಿ ಧರಿಸಿ, ಕರಾಳ ದಿನವಾಗಿ ಆಚರಿಸಲು ನಿರ್ಧರಿಸಿದ್ದಾರೆ’ ಎಂದರು.

ADVERTISEMENT

‘ಶಾಲೆಗಳ ಮಾನ್ಯತೆ ನವೀಕರಣ, ಆರ್‌ಟಿಇ ಮರುಚಾಲನೆ, ಆರ್‌ಟಿಇ ಶುಲ್ಕ ಮರುಪಾವತಿ, ಗ್ರ್ಯಾಚುಯಿಟಿ ಇತ್ಯಾದಿ ಸಮಸ್ಯೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕೂಡಾ ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.