ADVERTISEMENT

ಉಪಚುನಾವಣೆ: ಮತ ಎಣಿಕೆ ನಾಳೆ

ನಗರದಲ್ಲಿ ಮೂರು ಕಡೆ ಎಣಿಕೆ ಕೇಂದ್ರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 19:28 IST
Last Updated 7 ಡಿಸೆಂಬರ್ 2019, 19:28 IST
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿರುವ ಭದ್ರತಾ ಕೊಠಡಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿರುವ ಭದ್ರತಾ ಕೊಠಡಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ   

ಬೆಂಗಳೂರು: ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಚುನಾವಣಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಸೋಮವಾರ (ಡಿ.9) ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಎಣಿಕೆ ಕೇಂದ್ರಗಳ ಉಸ್ತುವಾರಿಗಾಗಿ 108 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. 128 ಎಣಿಕೆ ಸಹಾಯಕರು, 107 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಮೊಬೈಲ್ ನಿಷೇಧ: ‘ಅಭ್ಯರ್ಥಿಗಳ ಏಜೆಂಟರು, ಕೌಂಟಿಂಗ್ ಏಜೆಂಟರು ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಕೈ ಚೀಲಗಳೊಂದಿಗೆ ಎಣಿಕೆ ಕೇಂದ್ರಕ್ಕೆ ಪ್ರವೇಶ ಮಾಡುವಂತಿಲ್ಲ. ಮಾಧ್ಯಮ ಪ್ರತಿನಿಧಿಗಳು ಹೊರತುಪಡಿಸಿ ಬೇರೆ
ಯವರು ಮೊಬೈಲ್‌ ತರುವಂತಿಲ್ಲ’ ಎಂದರು.

ADVERTISEMENT

‘ಅಭ್ಯರ್ಥಿ ಅಥವಾ ಏಜೆಂಟ‌ರಿಗೆ ಎಲ್ಲಾ ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶಿಸಲು ಅವಕಾಶ ಇಲ್ಲ. ಅವರಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಎಲ್ಲಾ ಎಣಿಕಾ ಏಜೆಂಟರಿಗೆ ಕುಳಿತು ಕೊಳ್ಳಲು ಕುರ್ಚಿ ವ್ಯವಸ್ಥೆ ಇರುವುದಿಲ್ಲ’ ಎಂದರು.

1,300 ಭದ್ರತಾ ಸಿಬ್ಬಂದಿ ನಿಯೋಜನೆ: ಮತ ಎಣಿಕೆ ಭದ್ರತೆಗಾಗಿ 1,300 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಪ್ರತಿಯೊಂದು ಎಣಿಕೆ ಕೇಂದ್ರದ ಭದ್ರತೆಯ ಉಸ್ತುವಾರಿಯನ್ನು ಇಬ್ಬರು ಡಿಸಿಪಿಗಳು ನೋಡಿಕೊಳ್ಳಲಿದ್ದಾರೆ’ ಎಂದರು.

‘ಪೊಲೀಸರ ಜೊತೆಗೆ ಕೆಎಸ್ಆರ್‌ಪಿ ತುಕಡಿ ಹಾಗೂ ಅರೆ ಸೇನಾ ಪಡೆಗಳನ್ನೂ ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿ.8ರ ಮಧ್ಯರಾತ್ರಿಯಿಂದ ಡಿ.9ರ ಮಧ್ಯರಾತ್ರಿಯವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.