ADVERTISEMENT

Karnataka Bypoll | ರಂಗೇರಿದ ಅಖಾಡ, ಎಚ್‌ಡಿಕೆ–ಡಿಕೆಶಿ ರಾಜಕೀಯ ಜಿದ್ದಾಜಿದ್ದಿ

ಬಿಜೆಪಿ ತೊರೆದು ‘ಕೈ’ ಹಿಡಿದ ಯೋಗೇಶ್ವರ್ l ಎಚ್‌ಡಿಕೆ–ಡಿಕೆಶಿ ಜಿದ್ದಾಜಿದ್ದಿಗೆ ಅಣಿಯಾದ ವೇದಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:30 IST
Last Updated 24 ಅಕ್ಟೋಬರ್ 2024, 0:30 IST
<div class="paragraphs"><p>ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ</p></div>

ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ

   

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ. ಯೋಗೇಶ್ವರ್, ದಿಢೀರ್ ಕಾಂಗ್ರೆಸ್‌ ಪಕ್ಷಕ್ಕೆ ಜಿಗಿದಿದ್ದಾರೆ. ಇದರಿಂದಾಗಿ, ಉ‍‍ಪ ಚುನಾವಣೆ ರಾಜಕಾರಣಕ್ಕೆ ಬುಧವಾರ ಹೊಸ ತಿರುವು ಸಿಕ್ಕಿದೆ. ಈ ಬೆಳವಣಿಗೆಯು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಉ‍ಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಪರಿಣಮಿಸಿದೆ.

‘ಕೈ’ ಪಾಳಯ ಸೇರಿದ ಸಿ.ಪಿ. ಯೋಗೇಶ್ವರ್‌ಗೆ ಟಿಕೆಟ್‌ ಖಚಿತವಾಗಿದ್ದು, ಗುರುವಾರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. 

ADVERTISEMENT

ಉಪ ಚುನಾವಣೆ ನಡೆಯಲಿರುವ ಸಂಡೂರು ಕ್ಷೇತ್ರದಿಂದ ಸಂಸದ ಇ. ತುಕಾರಾಂ ಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಆ ಪಕ್ಷದ ನಾಯಕರು, ಶಿಗ್ಗಾವಿ ಕ್ಷೇತ್ರದ ಹುರಿಯಾಳನ್ನು ಇನ್ನಷ್ಟೆ ಅಂತಿಮಗೊಳಿಸಬೇಕಿದೆ.

ಮೂರೂ ಕ್ಷೇತ್ರಗಳನ್ನು ಗೆಲ್ಲಲು ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ತನ್ನದೇ ಕಾರ್ಯತಂತ್ರ ರೂಪಿಸಿಕೊಂಡಿದೆ. ಈ ಕಾರಣಕ್ಕೆ ಯೋಗೇಶ್ವರ್‌ ಅವರನ್ನು ಸೆಳೆದು ಚನ್ನಪಟ್ಟಣದ ಅಖಾಡಕ್ಕಿಳಿಸಲು ಮುಂದಾಗಿರುವ ಕಾಂಗ್ರೆಸ್‌ ನಾಯಕರು, ಸಂಡೂರಿನಲ್ಲಿ ‘ಕುಟುಂಬ’ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ. ಶಿಗ್ಗಾವಿ ಕ್ಷೇತ್ರದ ಗೆಲುವು ದಕ್ಕಿಸಿಕೊಳ್ಳುವ ಅಭ್ಯರ್ಥಿ ಆಯ್ಕೆಯ ‘ಲೆಕ್ಕಾಚಾರ’ದಲ್ಲಿದ್ದಾರೆ. 

ತನ್ನ ನೆಲೆ ಭದ್ರವಲ್ಲದ ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಬೇಕೆಂದು ಡಿ.ಕೆ. ಶಿವಕುಮಾರ್‌– ಡಿ.ಕೆ. ಸುರೇಶ್‌ ಹಲವು ತಿಂಗಳುಗಳಿಂದ ಕ್ಷೇತ್ರಕ್ಕೆ ಧುಮುಕಿದ್ದರು. ಇಲ್ಲಿಂದ ಕಣಕ್ಕಿಳಿಯಲೇಬೇಕೆಂಬ ಮಹಾದಾಸೆಯಿಂದ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯೋಗೇಶ್ವರ್‌, ‘ಮೈತ್ರಿ’ ಟಿಕೆಟ್‌ ಸಿಗುವುದಿಲ್ಲವೆಂದು ಖಚಿತ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸದಾಶಿವನಗರದ ಮನೆಯ ಅಂಗಳದಲ್ಲಿ ಬುಧವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದರು. ಆ ಮೂಲಕ, ಕಾಂಗ್ರೆಸ್‌ನಿಂದ ಅವರು ಕಣಕ್ಕಿಳಿಯುವುದೂ ಖಚಿತವಾಗಿತ್ತು.

ಚನ್ನಪಟ್ಟಣದಲ್ಲಿ ತಮ್ಮದೇ ‘ಮತ ಬ್ಯಾಂಕ್‌’ ಹೊಂದಿರುವ ಯೋಗೇಶ್ವರ್ ಅವರನ್ನು ಪಕ್ಷದ ಮದ್ದೂರು ಶಾಸಕ ಕದಲೂರು ಉದಯ್‌ಗೌಡ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮೂಲಕ ಗಾಳ ಹಾಕಿದ್ದ ಡಿಕೆ ಸಹೋದರು ತಮ್ಮ ಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ‘ದಳಪತಿ’ಗಳನ್ನು ಕಟ್ಟಿ ಹಾಕುವ ತಂತ್ರಗಾರಿಕೆ ಹೆಣೆದಿದ್ದಾರೆ. 

ರಾಜ್ಯ ಸರ್ಕಾರದ ವಿರುದ್ಧ ನಿತ್ಯ ವಾಗ್ದಾಳಿ ನಡೆಸುತ್ತಲೇ ಇರುವ ಕುಮಾರಸ್ವಾಮಿ, ಸರ್ಕಾರವನ್ನು ಅಸ್ಥಿರಗೊಳಿಸುವ ಮಾತುಗಳನ್ನೂ ಆಡುತ್ತಿದ್ದಾರೆ. ಕುಮಾರಸ್ವಾಮಿ ಅವರ ‌ಈ ಲೆಕ್ಕಾಚಾರಗಳನ್ನು ಬುಡುಮೇಲು ಮಾಡಬೇಕಿದ್ದರೆ ಅವರ ಪಕ್ಷವನ್ನು ರಾಮನಗರ ಜಿಲ್ಲೆಯಿಂದಲೇ ಹೊರಗಟ್ಟಬೇಕೆಂದು ಶಿವಕುಮಾರ್‌ ಅವರ ತಂತ್ರ. ಚನ್ನಪಟ್ಟಣ ಕ್ಷೇತ್ರವನ್ನೂ ಕೈವಶ ಮಾಡಿಕೊಂಡು ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವದಲ್ಲಿ ಇಲ್ಲದಂತೆ ಮಾಡಬೇಕೆಂಬುದು ಅವರ ಕಾರ್ಯತಂತ್ರ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳುವುದರ ಭಾಗವಾಗಿ ಶಿವಕುಮಾರ್ ಅವರು ಯೋಗೇಶ್ವ‌ರ್ ಅವರನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡರು ಎಂಬ ಚರ್ಚೆಯೂ ಕಾಂಗ್ರೆಸ್ ವಲಯದಲ್ಲಿದೆ.

‘ಕೈ’ ಹಿಡಿದ ಯೋಗೇಶ್ವರ್‌:

ಬುಧವಾರ ಬೆಳಿಗ್ಗೆ ಡಿ.ಕೆ. ಶಿವಕುಮಾರ್‌ ಅವರ ಸದಾಶಿವನಗರದ ನಿವಾಸಕ್ಕೆ ಬಂದಿದ್ದರು. ಅಲ್ಲಿಂದ ಶಿವಕುಮಾರ್‌ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಹೋಗಿದ್ದರು. ಅಲ್ಲಿ ಕೆಲಹೊತ್ತು ಮಾತುಕತೆ ನಡೆಸಿದ ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿದ ಅವರು ಕಾಂಗ್ರೆಸ್‌ ಸೇರಿದರು. ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮದ್‌ ಖಾನ್, ಎನ್‌. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಡಾ. ಎಂ.ಸಿ. ಸುಧಾಕರ್, ಮಾಜಿ ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ  ಜಿ.ಸಿ. ಚಂದ್ರಶೇಖರ್, ರಾಮನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಂಗಾಧರ್, ಶಾಸಕರಾದ ಬಾಲಕೃಷ್ಣ, ರಂಗನಾಥ್, ಕದಲೂರು ಉದಯ್ ಗೌಡ, ರವಿ ಕುಮಾರ್ ಗಣಿಗ, ಎ.ಎಸ್‌. ಪೊನ್ನಣ್ಣ, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ನಜೀರ್ ಅಹ್ಮದ್, ದಿನೇಶ್ ಗೂಳಿಗೌಡ ಉಪಸ್ಥಿತರಿದ್ದರು.

ಶಿಗ್ಗಾವಿ ‘ಲೆಕ್ಕಾಚಾರ’ದಲ್ಲಿ ಕಾಂಗ್ರೆಸ್

ಸಂಡೂರು ಟಿಕೆಟ್‌ ಅನ್ನು ಇ. ತುಕಾರಾಂ ಕುಟುಂಬಕ್ಕೆ ನೀಡಬಾರದು ಎಂಬ ಅಪಸ್ವರದ ಮಧ್ಯೆಯೂ, ಅವರ ಪತ್ನಿ ಅನ್ನಪೂರ್ಣ ಅವರನ್ನು ಕಣಕ್ಕಿಳಿಸಲಾಗಿದೆ.

ಆದರೆ, ಶಿಗ್ಗಾವಿ ಕ್ಷೇತ್ರದ ಟಿಕೆಟ್‌ ಅನ್ನು ಲಿಂಗಾಯತ ಸಮುದಾಯದವರಿಗೆ ನೀಡಬೇಕೇ, ಅಲ್ಪಸಂಖ್ಯಾತರನ್ನೇ (ಮುಸ್ಲಿಂ) ಮತ್ತೆ ಕಣಕ್ಕಿಳಿಸಬೇಕೇ ಎಂಬ ಗೊಂದಲ ‍ಪಕ್ಷದಲ್ಲಿ ಮುಂದುವರಿದಿದೆ. ಈ ಕ್ಷೇತ್ರದಲ್ಲಿ ಕಳೆದ ನಾಲ್ಕು ಅವಧಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಈ ಬಾರಿ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕುವುದೇ ಸೂಕ್ತ ಎಂಬ ನಿರ್ಣಯಕ್ಕೆ ಕಾಂಗ್ರೆಸ್‌ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ಆದರೆ, ಸಚಿವ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಕಾಂಗ್ರೆಸ್‌ನ ಮುಸ್ಲಿಂ ನಾಯಕರು ಈ ಬಾರಿಯೂ ಮುಸ್ಲಿಂ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಜಟಾಪಟಿಯ ಕಾರಣಕ್ಕೆ ಟಿಕೆಟ್‌ ಘೋಷಣೆ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಯಾಸೀರ್ ಅಹ್ಮದ್ ಖಾನ್ ಪಠಾಣ ಮತ್ತು ಸೈಯದ್ ಅಜ್ಜಂಪೀರ್ ಖಾದ್ರಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಲಿಂಗಾಯತ ಸಮುದಾಯದ ಸಾದರ ಉಪ ಪಂಗಡಕ್ಕೆ ಸೇರಿದ ಭರತ್‌ ಬೊಮ್ಮಾಯಿ ಅವರನ್ನು ಎದುರಿಸಲು ಅದೇ ಸಮುದಾಯದ ಪಂಚಮಸಾಲಿ ಉಪ ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ‘ಲೆಕ್ಕಾಚಾರ’ ಕಾಂಗ್ರೆಸ್‌ನಲ್ಲಿದೆ. ಅದಕ್ಕೆ ಪೂರಕವಾಗಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ತಮ್ಮ ಪತ್ನಿ ಶಿವಲೀಲಾ ಅಥವಾ ಮಗಳು ವೈಶಾಲಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ನಿಖಿಲ್‌ ಸ್ಪರ್ಧೆಗೆ ಒತ್ತಡ?: ಇಂದು ನಿರ್ಧಾರ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ದಿನೇದಿನೇ ಬದಲಾಗುತ್ತಿದ್ದು, ಯೋಗೇಶ್ವರ್‌ ಕಾಂಗ್ರೆಸ್‌ ಸೇರಿದ ನಂತರ ಮೈತ್ರಿ ಅಭ್ಯರ್ಥಿ ಯಾರಾಗಬೇಕು ಎನ್ನುವ ಲೆಕ್ಕಾಚಾರಗಳು ಮತ್ತೆ ಬಿರುಸು ಪಡೆದಿವೆ. 

ಗೆದ್ದು ಕ್ಷೇತ್ರ ಉಳಿಸಿಕೊಳ್ಳಲೇಬೇಕಾದರೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದವರು, ಅದರಲ್ಲೂ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸುವ ಒತ್ತಡ ಹೆಚ್ಚುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅ.24ರಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಪಕ್ಷದ ಮುಖಂಡರ ಸಭೆ ಕರೆಯಲಾಗಿದೆ. ಸಭೆಯ ನಂತರ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ. 

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವನ್ನು ಬಿಜೆಪಿ ವರಿಷ್ಠರು, ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಯೋಗೇಶ್ವರ್‌ ಸಾಕಷ್ಟು ಒತ್ತಡ ಹಾಕಿದ್ದರು. ಜೆಡಿಎಸ್‌ನಿಂದ ಯೋಗೇಶ್ವರ್‌ ಅವರನ್ನೇ ಕಣಕ್ಕೆ ಇಳಿಸಲು, ಕುಮಾರಸ್ವಾಮಿ ಒಪ್ಪಿಕೊಂಡಿದ್ದರು. ಅದನ್ನು ನಿರಾಕರಿಸಿದ್ದ ಯೋಗೇಶ್ವರ್‌, ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್‌ಗೆ ಜಿಗಿದಿದ್ದಾರೆ. 

ಈ ಬೆಳವಣಿಗೆ ಬೆನ್ನಲ್ಲೇ, ಜೆಡಿಎಸ್‌ ವರಿಷ್ಠರು ಚನ್ನಪಟ್ಟಣದ ಮುಖಂಡರು, ಪ್ರಮುಖ ಕಾರ್ಯಕರ್ತರ ಜತೆ ಬುಧವಾರ ದಿನವಿಡೀ ಮಾತುಕತೆ ನಡೆಸಿದರೂ, ಅಭ್ಯರ್ಥಿ ಆಯ್ಕೆ‌ಯ ವಿಷಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಯೋಗೇಶ್ವರ್‌ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯುತ್ತಿದ್ದು, ಅವರ ಸ್ವಂತ ಬಲದ ಜತೆಗೆ, ಕಾಂಗ್ರೆಸ್‌ ಮತಗಳೂ ಧ್ರುವೀಕರಣಗೊಳ್ಳುತ್ತವೆ. ಹೀಗಾದಲ್ಲಿ, ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್‌ ಘಟಕದ ಅಧ್ಯಕ್ಷ ಜಯಮುತ್ತು ಅವರನ್ನು ಕಣಕ್ಕೆ ಇಳಿಸುವುದು ಹೆಚ್ಚು ಲಾಭ ತರುವುದಿಲ್ಲ. ಅದರ ಬದಲಿಗೆ ದೇವೇಗೌಡರ ಕುಟುಂಬದವರೇ ಸ್ಪರ್ಧಿಸಿದರೆ ಪೈಪೋಟಿ ನೀಡಬಹುದು. ಬಿಜೆಪಿಯೂ ಬೆನ್ನಿಗಿರುತ್ತದೆ. ಇಲ್ಲದಿದ್ದರೆ ಪಕ್ಷದ ಕಾರ್ಯಕರ್ತರಲ್ಲೇ ಗುಂಪುಗಾರಿಕೆ ತಲೆದೋರುವ ಸಾಧ್ಯತೆ ಇದೆ ಎಂದು ಚನ್ನಪಟ್ಟಣದ ಮುಖಂಡರು ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ.

ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಹೀಗಾಗಿ, ಯಾವುದೇ ಷರತ್ತುಗಳನ್ನು ವಿಧಿಸದೆ ಅವರು ಮರಳಿ ಗೂಡಿಗೆ ಬಂದಿದ್ದಾರೆ
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಯೋಗೇಶ್ವರ್ ಅವರನ್ನು ಅವಲಂಬಿಸಿರಲಿಲ್ಲ. ಅವರು ಬಿಟ್ಟು ಹೋಗಿದ್ದರಿಂದ ಪಕ್ಷಕ್ಕೆ ನಷ್ಟವೂ ಆಗಿಲ್ಲ, ಪರಿಣಾಮವೂ ಬೀರುವುದಿಲ್ಲ
ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ
ಶಿವಕುಮಾರ್‌ ಅವರು ಯೋಗೇಶ್ವರ್ ತಲೆ ಕೆಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೇಗೆ ತುಳಿಯಬೇಕು ಎಂಬ ಯೋಜನೆಯನ್ನೂ ರೂಪಿಸಿರುತ್ತಾರೆ
ಆರ್‌.ಅಶೋಕ, ವಿರೋಧ ಪಕ್ಷದ ನಾಯಕ, ವಿಧಾನಸಭೆ
ಅಧಿಕಾರ ಎಲ್ಲಿ ಸಿಗುತ್ತದೆಯೋ ಯೋಗೇಶ್ವರ್‌ ಅಲ್ಲಿಗೆ ಹೋಗುತ್ತಾರೆ. ಚನ್ನಪಟ್ಟಣದಲ್ಲಿ ಸುರೇಶ್‌ ನಿಲ್ಲಿಸುವ ಧೈರ್ಯವಿಲ್ಲದೇ ಕಾಂಗ್ರೆಸ್ ನಾಯಕರು ಆಪರೇಷನ್‌ ಹಸ್ತ ನಡೆಸಿದ್ದಾರೆ
ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ರಾಜ್ಯಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.