ADVERTISEMENT

ಬಿ.ಎ. ಜಗದೀಶ್ ವಿರುದ್ಧದ ಆರೋಪ: ವರದಿ ನೀಡುವಂತೆ ರಾಜ್ಯಕ್ಕೆ ಕೇಂದ್ರ ನಿರ್ದೇಶನ

ಹಾಸನದ 61 ಎಕರೆ ಅರಣ್ಯ ಭೂಮಿ ಅಕ್ರಮವಾಗಿ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 20:16 IST
Last Updated 15 ನವೆಂಬರ್ 2023, 20:16 IST
<div class="paragraphs"><p>ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಕೈ ತಪ್ಪುವ ಆತಂಕದಲ್ಲಿರುವ ಕಾನು ಭೂಮಿ ನೋಟ</p></div>

ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಕೈ ತಪ್ಪುವ ಆತಂಕದಲ್ಲಿರುವ ಕಾನು ಭೂಮಿ ನೋಟ

   

ನವದೆಹಲಿ: 61.32 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಗೆ ಅಕ್ರಮವಾಗಿ ಮಾರ್ಪಡಿಸಿದ ಕುರಿತು ಹಾಸನದ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ವಿರುದ್ಧ ಮಾಡಿರುವ ಆರೋಪಗಳ ಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಅರಣ್ಯ ಇಲಾಖೆಗೆ ಸೂಚಿಸಿದೆ.

ಈ ಸಂಬಂಧ ನವೆಂಬರ್‌ 6ರಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥರಿಗೆ (ಪಿಸಿಸಿಎಫ್‌) ಅವರಿಗೆ ಪತ್ರ ಬರೆದಿರುವ ಸಚಿವಾಲಯದ ಉಪ ಮಹಾನಿರೀಕ್ಷಕ ಎಂ.ಕೆ. ಶಂಭು, ‘ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಹಾಗೂ ಭೂ ಅಕ್ರಮದ ಬಗ್ಗೆ ಹಾಸನದ ಡಿಸಿಎಫ್‌ ವರದಿ ನೀಡಿದ್ದಾರೆ. ಈ ಸಂಬಂಧ ಒಂದು ತಿಂಗಳ ಒಳಗೆ ವಾಸ್ತವಾಂಶದ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ. 

ADVERTISEMENT

‘ಈ ಅಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಗೆ 2022ರ ಮಾರ್ಚ್‌ 4ರಂದು ಸಚಿವಾಲಯ ಸೂಚಿಸಿತ್ತು. ಆದರೆ, ಅರಣ್ಯ ಇಲಾಖೆ ಯಾವುದೇ ವರದಿ ಸಲ್ಲಿಸಿರಲಿಲ್ಲ. ಮತ್ತೊಮ್ಮೆ ಜ್ಞಾ‍ಪನಾ ಪತ್ರವನ್ನೂ ಕಳುಹಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ. 

ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದ ಈ ಪ್ರಕರಣವನ್ನು ಹಾಸನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಅರಣ್ಯ ಸಂಚಾರಿ ದಳ) ಕಾರ್ಯನಿರ್ವಹಿಸುತ್ತಿದ್ದ ಎನ್‌.ರವೀಂದ್ರ ಕುಮಾರ್ ಅವರು 2022ರ ಫೆಬ್ರುವರಿಯಲ್ಲಿ ಪತ್ತೆ ಹಚ್ಚಿದ್ದರು. ಹಾಸನದ ತ್ಯಾವಿಹಳ್ಳಿಯ ಸರ್ವೆ ನಂಬರ್ 22ರಲ್ಲಿ ಹರಡಿರುವ 61.32 ಎಕರೆ ಅರಣ್ಯ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.