ADVERTISEMENT

ಜೈಲಿನಲ್ಲಿರುವ ಪೋಕ್ಸೊ ಪ್ರಕರಣದ ಆರೋಪಿ: ಸ್ವಾಮೀಜಿಗೆ ಹಾಸಿಗೆ, ಮನೆಯೂಟ: HC ಅಸ್ತು

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:18 IST
Last Updated 9 ಮೇ 2024, 15:18 IST
<div class="paragraphs"><p>ಕರ್ನಾಟಕ ಹೈಕೋರ್ಟ್</p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ‘ಜೈಲಿನಲ್ಲಿ ಮಲಗಲು ನನಗೆ ಹಾಸಿಗೆ ಬೇಕು, ಮನೆಯೂಟವೇ ಬೇಕು’ ಎಂಬ ಪೋಕ್ಸೊ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ಕುಣಿಗಲ್‌ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಂಗರಹಳ್ಳಿ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನ ಶ್ರೀಮಠದ ಬಾಲ ಮಂಜುನಾಥ ಸ್ವಾಮೀಜಿಯ ಮಧ್ಯಂತರ ಮನವಿಗೆ ಹೈಕೋರ್ಟ್‌ ಅಸ್ತು ಎಂದಿದೆ.

‘ಈ ಸಂಬಂಧ ತುಮಕೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಬಾಲ ಮಂಜುನಾಥ ಸ್ವಾಮೀಜಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರು ಗುರುವಾರ ಈ ಕುರಿತಂತೆ ಆದೇಶಿಸಿದರು.

ADVERTISEMENT

‘ಅರ್ಜಿದಾರರು ತಮ್ಮ ರಿಸ್ಕ್‌ನಲ್ಲಿ ಮಠದಿಂದ ಅಥವಾ ಮನೆಯಿಂದ ಊಟವನ್ನು ತರಿಸಿಕೊಳ್ಳಬಹುದು. ಆದರೆ, ಅದರ ಅಪಾಯಗಳ ಹೊಣೆಯನ್ನು ತಾವೇ ಹೊರಬೇಕು. ತಂದ ಊಟವನ್ನು ಜೈಲು ಅಧಿಕಾರಿಗಳು ಪರೀಕ್ಷಿಸದ ನಂತರವೇ ಅರ್ಜಿದಾರರು ಸೇವಿಸಲು ಅವಕಾಶ ಕಲ್ಪಿಸಬೇಕು. ಅಂತೆಯೇ, ಅರ್ಜಿದಾರರು ತಮ್ಮದೇ ಆದ ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲು ಅನುಮತಿ ನೀಡಬೇಕು. ಅಗತ್ಯವಿದ್ದರೆ ಈ ಆದೇಶದ ಮಾರ್ಪಾಡಿಗೆ ಜೈಲು ಅಧಿಕಾರಿಗಳು ನ್ಯಾಯಾಲಯವನ್ನು ಕೋರಬಹುದು’ ಎಂದು ನ್ಯಾಯಪೀಠ ತುಮಕೂರು ಕಾರಾಗೃಹದ ಸೂಪರಿಂಟೆಂಡೆಂಟ್‌ ಅವರಿಗೆ ನಿರ್ದೇಶಿಸಿದೆ. ಸ್ವಾಮೀಜಿ ಪರ ಹೈಕೋರ್ಟ್ ವಕೀಲೆ ಲೀಲಾ ಪಿ.ದೇವಾಡಿಗ ವಾದ ಮಂಡಿಸಿದರು. 

ಪ್ರಕರಣವೇನು?: ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮೀಜಿ ವಿರುದ್ಧ 2024ರ ಮಾರ್ಚ್‌ 7ರಂದು ದಾಖಲಾಗಿರುವ ದೂರಿನ ಅನುಸಾರ ಪೊಲೀಸರು ಸ್ವಾಮೀಜಿಯನ್ನು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಅಡಿಯಲ್ಲಿ ಬಂಧಿಸಲಾಗಿದೆ. ಇವರನ್ನು ಮಾರ್ಚ್‌ 14ರಂದು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಸ್ವಾಮೀಜಿ ಸದ್ಯ ತುಮಕೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ‘ಜೈಲಿನಲ್ಲಿ ಪೂರೈಸಲಾಗುತ್ತಿರುವ ಊಟ ನನಗೆ ಸರಿಹೊಂದುತ್ತಿಲ್ಲ. ಆದ್ದರಿಂದ, ಮಠದಿಂದ ಅಥವಾ ಮನೆಯಿಂದ ಊಟ, ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಬೇಕು’ ಎಂದು ಅವರು ಜೈಲಿನ ಅಧಿಕಾರಿಗಳಿಗೆ ಕೋರಿದ್ದರು. ಆದರೆ, ಅಧಿಕಾರಿಗಳು ಇದಕ್ಕೆ ಸಮ್ಮತಿ ನೀಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.