ADVERTISEMENT

ಖಾಸಗಿ ಶಾಲೆಗಳಿಗೆ ಮಕ್ಕಳ ಆಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2024, 22:30 IST
Last Updated 22 ಮೇ 2024, 22:30 IST
   

ಬೆಂಗಳೂರು: ಬೇಸಿಗೆ ರಜೆಯಲ್ಲೂ ತರಗತಿ ನಡೆಸುತ್ತಿದ್ದ ಕೆಲ ಖಾಸಗಿ ಶಾಲೆಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಸಿಪಿಸಿಆರ್) ಬುಧವಾರ ದಿಢೀರ್ ಭೇಟಿ, ಪರಿಶೀಲನೆ ನಡೆಸಿತು.

‘ಕೆಲ ಖಾಸಗಿ ಶಾಲೆಗಳು ಏ.15ರಿಂದಲೇ ಕಾರ್ಯನಿರ್ವಹಿಸುತ್ತಿವೆ ಎಂದು ಕರ್ನಾಟಕ ಶಾಲಾ ಕಾಲೇಜು ಪಾಲಕರ ಸಂಘಗಳ ಸಮನ್ವಯ ಸಮಿತಿ ದೂರು ಸಲ್ಲಿಸಿತ್ತು. ಮೇ 29ರಿಂದ ಶಾಲೆಗಳನ್ನು ಆರಂಭಿಸಬೇಕು. ಅದಕ್ಕೆ ಮೊದಲು ತರಗತಿಗಳನ್ನು ನಡೆಸಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಚೆಗಷ್ಟೇ ಸುತ್ತೋಲೆ ಹೊರಡಿಸಿತ್ತು. ಆದರೂ ಶಾಲೆಗಳು ರಜೆ ನೀಡಿರಲಿಲ್ಲ. ಹಾಗಾಗಿ, ಭೇಟಿ ನೀಡಿ ಎಚ್ಚರಿಕೆ ನೀಡಿದ್ದೇವೆ’ ಎಂದು ಆಯೋಗದ ಅಧ್ಯಕ್ಷ ನಾಗಣ್ಣಗೌಡ ಹೇಳಿದರು.

‘ರಾಜಾಜಿನಗರ ಹಾಗೂ ಸುತ್ತಮುತ್ತಲಿನ ಕೆಲ ಶಾಲೆಗಳಿಗೆ ಭೇಟಿ ನೀಡಿದೆವು. ಶಾಲಾ ಆಡಳಿತ ಮಂಡಳಿಗಳು ಶಾಲೆ ತೆರೆದಿರುವ ತಮ್ಮ ನಿರ್ಧಾರ ಸಮರ್ಥಿಸಿಕೊಳ್ಳಲು ಮುಂದಾದವು. ಕಡಿಮೆ ಅಂಕ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮಾಡುತ್ತಿರುವುದಾಗಿ ಶಿಕ್ಷಕರು ತಿಳಿಸಿದರು. ಆದರೆ, ವಾಸ್ತವದಲ್ಲಿ  ಕೆಳಹಂತದ ತರಗತಿಗಳೂ ನಡೆಯುತ್ತಿದ್ದವು. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸಲು ಶಿಫಾರಸು ಮಾಡುತ್ತೇವೆ’ ಎಂದು ನಾಗಣ್ಣಗೌಡ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.