ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಅಂಗವಿಕಲ ಕೋಟಾದಲ್ಲಿ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸಿದ್ದ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಚ್ಚು ನ್ಯೂನತೆ ನಮೂದಿಸಿ, ತಪ್ಪು ಮಾಹಿತಿ ನೀಡಿದ್ದು ಮರು ತಪಾಸಣೆಯಲ್ಲಿ ದೃಢಪಟ್ಟಿದೆ.
2024–25ನೇ ಸಾಲಿಗೆ ಪ್ರವೇಶ ಬಯಸಿ ಸಿಇಟಿ ಬರೆದಿದ್ದ ಅಭ್ಯರ್ಥಿಗಳಲ್ಲಿ 783 ಅಭ್ಯರ್ಥಿಗಳು ಅಂಗವಿಕಲ ಕೋಟಾದಲ್ಲಿ ಮೀಸಲಾತಿ ಬಯಸಿದ್ದರು. ತಜ್ಞ ವೈದ್ಯರು ಜೂನ್ 10ರಿಂದ 12ರವರೆಗೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ವೈದ್ಯಕೀಯ ತಪಾಸಣೆ, ದಾಖಲಾತಿ ಪರಿಶೀಲನೆ ನಡೆಸಲಾಗಿತ್ತು.
ಮೀಸಲಾತಿ ಪಡೆಯಲು ಅಂಗವಿಕಲ ವಿದ್ಯಾರ್ಥಿಗಳಿಗೆ ಶೇ 40ಕ್ಕಿಂತ ಹೆಚ್ಚು ನ್ಯೂನತೆ ಇರಬೇಕು. ಅರ್ಜಿ ಸಲ್ಲಿಸಿದ್ದ ಎಲ್ಲರೂ ಶೇ 40ಕ್ಕಿಂತ ಹೆಚ್ಚು ನ್ಯೂನತೆ ಹೊಂದಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಕೆಇಎನಲ್ಲಿ ಮರು ತಪಾಸಣೆಗೆ ಒಳಪಡಿಸಿದಾಗ 320 ವಿದ್ಯಾರ್ಥಿಗಳಿಗೆ ಶೇ 30ರ ಒಳಗೆ ನ್ಯೂನತೆ ಇರುವುದು ದೃಢಪಟ್ಟಿದೆ. ದೃಷ್ಟಿ, ಶ್ರವಣ ಹಾಗೂ ಕೈ–ಕಾಲು ಚಲನೆಯ ನ್ಯೂನತೆ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಅನರ್ಹರಾಗಿದ್ದಾರೆ. ಹಾಗಾಗಿ, ಕೆಇಎ ಅವರಿಗೆಲ್ಲ ಮೀಸಲಾತಿ ಸೌಲಭ್ಯ ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.