ಬೆಂಗಳೂರು: ಡಿ.ಕೆ.ಸುರೇಶ್ ಅವರಂತಹ ಜವಾಬ್ದಾರಿಯುತ ಸಂಸದರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯವಾದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ’ ಎಂಬ ಅವರ ಹೇಳಿಕೆ ಖಂಡನೀಯ. ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವ ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದ ಜನಪ್ರತಿನಿಧಿಗಳು ಮಾತನಾಡುವ ಮೊದಲು ಆಲೋಚಿಸಬೇಕು ಎಂದರು.
ಹಿಂದೆ ಯುಪಿಎ ಸರ್ಕಾರ ಇದ್ದಾಗ ಕರ್ನಾಟಕ ರಾಜ್ಯಕ್ಕೆ ₹60 ಸಾವಿರ ಕೋಟಿ ಕೊಟ್ಟಿದ್ದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ₹2.36 ಲಕ್ಷ ಕೋಟಿ ಅನುದಾನ ರಾಜ್ಯಕ್ಕೆ ಕೊಟ್ಟಿದೆ. ತೆರಿಗೆ ಹಂಚಿಕೆ ಮೂಲಕ ಯುಪಿಎ ಅವಧಿಯಲ್ಲಿ ₹81 ಸಾವಿರ ಕೋಟಿ ಹಂಚಿಕೆಯಾಗಿತ್ತು. ಬಿಜೆಪಿ ಅವಧಿಯಲ್ಲಿ ₹2.82 ಲಕ್ಷ ಕೋಟಿ ಸಿಕ್ಕಿದೆ. ಅಂಕಿ–ಅಂಶ ಅರ್ಥ ಮಾಡಿಕೊಳ್ಳದೇ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.