ಬೆಂಗಳೂರು: ಕೆಪಿಎಸ್ಸಿ ಅಧ್ಯಕ್ಷ ಹಾಗೂ ಕೆಲವು ಸದಸ್ಯರು ಮತ್ತು ಕಾರ್ಯದರ್ಶಿ ನಡುವಿನ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೆ, ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್) 10 ದಿನಗಳ (ಫೆ.7ರಿಂದ 17ರವರೆಗೆ) ಗಳಿಕೆ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಲತಾಕುಮಾರಿ ಅವರ ರಜಾ ಅವಧಿಯಲ್ಲಿ ಕಾರ್ಯದರ್ಶಿ ಹುದ್ದೆಯನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ವೈಯಕ್ತಿಕ ನೆಲೆಯಲ್ಲಿ ಲತಾ ಕುಮಾರಿ ಅವರಿಗೆ ಗಳಿಕೆ ರಜೆ ಮಂಜೂರು ಮಾಡಲಾಗಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಕೆಪಿಎಸ್ಸಿ ಕಾನೂನು ಮುಖ್ಯಸ್ಥ (ಎಚ್ಎಲ್ಸಿ) ಹುದ್ದೆಗೆ ನೇಮಕ ವಿಷಯದಲ್ಲಿ ಆರಂಭಗೊಂಡ ಸಂಘರ್ಷವು ರಾಜ್ಯ ಸರ್ಕಾರ ಮತ್ತು ರಾಜಭವನದವರೆಗೂ ತಲುಪಿದೆ. ‘ಆಯೋಗದ ಆಯ್ಕೆ ಸಮಿತಿ ಸೂಚಿಸಿರುವ ಅಭ್ಯರ್ಥಿಯನ್ನು ಎಚ್ಎಲ್ಸಿ ಹುದ್ದೆಗೆ ನೇಮಿಸಿ ತಕ್ಷಣ ಆದೇಶ ಹೊರಡಿಸಬೇಕು. ಅದು ಸಾಧ್ಯವಾಗದೇ ಇದ್ದರೆ ರಜೆ ಮೇಲೆ ತೆರಳಬೇಕು‘ ಎಂದು ಕಾರ್ಯದರ್ಶಿ ಮೇಲೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಅವರಿಗೆ ಗಳಿಕೆ ರಜೆ ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.