ADVERTISEMENT

ರಾಜಭಾಷಾ ಆಯೋಗಕ್ಕೆ ಶಾಸನಾತ್ಮಕ ಸ್ಥಾನ -ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 21:45 IST
Last Updated 20 ಫೆಬ್ರುವರಿ 2023, 21:45 IST
   

ಬೆಂಗಳೂರು: ಸಾಮಾನ್ಯ ಜನರಿಗೂ ಸ್ಥಳೀಯ ಭಾಷೆಗಳಲ್ಲಿ ಕಾನೂನು ಜ್ಞಾನ ಮೂಡಿಸಲು ಶ್ರಮಿಸುತ್ತಿರುವ ‘ರಾಜಭಾಷಾ (ವಿಧಾಯೀ) ಆಯೋಗ’ಕ್ಕೆ ಇದೇ ಅಧಿವೇಶನದಲ್ಲಿ ಶಾಸನಾತ್ಮಕ ಸ್ಥಾನ ಕಲ್ಪಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ, ರಾಜಭಾಷಾ ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯಗಳ 74 ಅಧಿನಿಯಮಗಳ ಕನ್ನಡ ಆವೃತ್ತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜಭಾಷಾ ಆಯೋಗ 1973ರಲ್ಲೇ ಸ್ಥಾಪನೆಯಾದರೂ, ಇತರೆ ಆಯೋಗಗಳಂತೆ ಅದಕ್ಕೆ ಶಾಸನಾತ್ಮಕ ಸ್ಥಾನ ಇರಲಿಲ್ಲ. ಅದಕ್ಕಾಗಿ, ಈ ಅಧಿವೇಶನದಲ್ಲೇ ಮಸೂದೆ ಮಂಡಿಸಲಾಗುತ್ತಿದೆ ಎಂದರು.

ADVERTISEMENT

ಸಂವಿಧಾನ ರಚನೆಯ ಉದ್ದೇಶ ಸಫಲವಾಗಲು ಎಲ್ಲರೂ ಕಾನೂನು ಪಾಲನೆ ಮಾಡಬೇಕಿದೆ. ಹಿಂದೆಲ್ಲ ಆಳುವ ವರ್ಗಕ್ಕೆ ಕಾನೂನು ಗೊತ್ತಿದ್ದರೆ ಸಾಕು, ಇಂಗ್ಲಿಷ್‌ನಲ್ಲಿ ವಾದ ಮಾಡುವ ವಕೀಲರು ದೊಡ್ಡವರು ಎನ್ನುವ ಮನೋಭಾವ ಈಗ ಇಲ್ಲ. ಆಯೋಗ ಸ್ಥಳೀಯ ಭಾಷೆಗಳಲ್ಲಿ ಕಾನೂನುಗಳನ್ನು ಭಾಷಾಂತರಿಸುತ್ತಿದೆ. ಸಾಮಾನ್ಯ ಜನರಿಗೂ ಕಾನೂನಿನ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇದರಿಂದ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೂ ಸಹಕಾರಿಯಾಗಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.
ಅಶ್ವತ್ಥನಾರಾಯಣ, ಶಾಸಕ‌ ದಿನಕರ ಶೆಟ್ಟಿ, ರಾಜಭಾಷಾ ಆಯೋಗದ ಅಧ್ಯಕ್ಷ ಜಿ.ಶ್ರೀಧರ್‌, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಂ.ವೆಂಕಟೇಶ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.