ADVERTISEMENT

ಮದ್ಯದಂಗಡಿಗಳ ಹರಾಜು: ₹1,500 ಕೋಟಿ ಸಂಗ್ರಹ?

ಸ್ಥಗಿತ, ಬಾಕಿ ಮದ್ಯದಂಗಡಿಗಳ ಮರು ಹಂಚಿಕೆ ಪ್ರಸ್ತಾವ ಸಿದ್ದಪಡಿಸಿದ ಅಬಕಾರಿ ಇಲಾಖೆ

ರಾಜೇಶ್ ರೈ ಚಟ್ಲ
Published 22 ಸೆಪ್ಟೆಂಬರ್ 2024, 20:49 IST
Last Updated 22 ಸೆಪ್ಟೆಂಬರ್ 2024, 20:49 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬೆಂಗಳೂರು: ದೀರ್ಘ ಅವಧಿಯಿಂದ ನವೀಕರಣವಾಗದೆ ಸ್ಥಗಿತಗೊಂಡಿರುವ ಮತ್ತು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಸಂಸ್ಥೆ ಇನ್ನೂ ಆರಂಭಿಸದಿರುವ ಮದ್ಯದಂಗಡಿಗಳೂ ಸೇರಿ 500 ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಹರಾಜು ಅಥವಾ ಲಾಟರಿ ಎತ್ತುವ ಮೂಲಕ ಮರು ಹಂಚಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದೆ.

ಆ ಮೂಲಕ, ಸುಮಾರು ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಿಸುವ ಪ್ರಸ್ತಾವವನ್ನು ಇಲಾಖೆ ಸಿದ್ಧಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲಿ ಸಲ್ಲಿಸಲಿದೆ. 

‘ಪ್ರಸಕ್ತ ಸಾಲಿನಲ್ಲಿ (2024–25) ಈವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ವರಮಾನ ಸಂಗ್ರಹಿಸಲು ಇಲಾಖೆಗೆ ಸಾಧ್ಯವಾಗಿಲ್ಲ. ಹೀಗಾಗಿ, ಈಗಾಗಲೇ ಆರಂಭಗೊಂಡು ನಾನಾ ಕಾರಣಗಳಿಗೆ ಮುಚ್ಚಿರುವ ಮತ್ತು ಇನ್ನೂ ಆರಂಭವೇ ಆಗದ ಮದ್ಯದಂಗಡಿಗಳ ಪರವಾನಗಿಗಳಿಗೆ (ಸನ್ನದು) ಮರು ಜೀವ ನೀಡುವ ಕುರಿತು ಇಲಾಖಾ ಹಂತದಲ್ಲಿ ಚರ್ಚೆ ನಡೆದಿದೆ. ಸರ್ಕಾರಕ್ಕೆ ಸಲ್ಲಿಸಲು ಈಗಾಗಲೇ ಪ್ರಸ್ತಾವವನ್ನೂ ಸಿದ್ಧಪಡಿಸಲಾಗಿದೆ’ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ರಾಜ್ಯದ ವಿವಿಧೆಡೆಗಳಲ್ಲಿರುವ ಕೆಲವು ಮದ್ಯದಂಗಡಿಗಳ ಪರವಾನಗಿ ಬೇರೆ ಬೇರೆ ಕಾರಣಗಳಿಗೆ ಹಲವು ವರ್ಷಗಳಿಂದ ನವೀಕರಣಗೊಂಡಿಲ್ಲ. ಅಂತಹ ಮದ್ಯದಂಗಡಿಗಳು ಯಾವ ಜಿಲ್ಲೆಯಲ್ಲಿ ಎಷ್ಟಿವೆ ಎಂಬ ಮಾಹಿತಿ ಸಂಗ್ರಹಿಸಿ, ಯಾವ ರೀತಿ ಮರು ಹಂಚಿಕೆ ಮಾಡಬೇಕೆಂಬ ಬಗ್ಗೆ ಪ್ರಸ್ತಾವವನ್ನು ತಯಾರಿಸಲಾಗಿದೆ. ಎಂಎಸ್‌ಐಎಲ್‌ಗೆ 2009 ಮತ್ತು 2016ರ ಕೋಟಾಗಳ ಅಡಿಯಲ್ಲಿ ಒಟ್ಟು 1,363 ಮದ್ಯದಂಗಡಿಗಳನ್ನು ತೆರೆಯಲು  ಪರವಾನಗಿ ನೀಡಲು ಇಲಾಖೆ ತೀರ್ಮಾನಿಸಿತ್ತು. ಈ ಪೈಕಿ, 1,133 ಮದ್ಯದಂಗಡಿಗಳಿಗೆ ಮಂಜೂರಾತಿ ನೀಡಲಾಗಿದೆ. ಆದರೆ, ಅವುಗಳಲ್ಲಿ 41 ಸ್ಥಗಿತಗೊಂಡಿವೆ. ಎಂಎಸ್‌ಐಎಲ್‌ಗೆ ಇನ್ನೂ 230 ಮದ್ಯದಂಗಡಿಗಳಿಗೆ ಮಂಜೂರಾತಿ ನೀಡಲು ಬಾಕಿ ಇದೆ.

1987ರ ರಾಜ್ಯ ಸರ್ಕಾರದ ಆದೇಶದ ಅನ್ವಯ ಇಲಾಖೆಯು 4,206 ಮದ್ಯದಂಗಡಿಗಳಿಗೆ ಪರವಾನಗಿ ನೀಡಬೇಕಿದೆ. ಈ ಕೋಟಾದಡಿ 133 ಪರವಾನಗಿ ಕೊಡಲು ಇನ್ನೂ ಬಾಕಿ ಇವೆ. 102 ಪರವಾನಗಿಗಳು ಸ್ಥಗಿತಗೊಂಡಿವೆ. ಹೀಗೆ, ಎಂಎಸ್ಐಎಲ್‌ ಮತ್ತು ಸ್ಥಗಿತ ಗೊಂಡಿರುವ ಸಿಎಲ್ 2 (ವೈನ್ ಶಾಪ್) ಸೇರಿ ಒಟ್ಟು 506 ಪರವಾನಗಿಗಳನ್ನು ಖಾಸಗಿಯವರಿಗೆ ಹರಾಜು ಅಥವಾ ಲಾಟರಿ ಮೂಲಕ ನೀಡುವ ಕುರಿತು ಪ್ರಸ್ತಾವ

ವನ್ನು ಸಿದ್ಧಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಮದ್ಯದಂಗಡಿ ತೆರೆಯಲು ಎಂಎಸ್‌ಐಎಲ್‌ಗೆ ಪರವಾನಗಿ ನೀಡದಿರಲು ಇದೇ ಮಾರ್ಚ್‌ನಲ್ಲಿ ನಿರ್ಧರಿಸಲಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದ ನಂತರದಿಂದ ಈವರೆಗೆ ಯಾವುದೇ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಕೊಟ್ಟಿಲ್ಲ. ಪರವಾನಗಿ ಹೊಂದಿದವರ ಕುಟುಂಬದದಲ್ಲಿನ ಸಂಘರ್ಷ, ಯಾರ ಹೆಸರಿಗೆ ಸನ್ನದು ವರ್ಗಾಯಿಸಬೇಕೆಂಬ ವಿವಾದ, ಶುಲ್ಕ ಕಟ್ಟಲು ಹಣ ಇಲ್ಲದಿರುವುದು, ಸನ್ನದು ಹೊಂದಿದವರ ಮಕ್ಕಳು ಸರ್ಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿರುವ ಕಾರಣಕ್ಕೆ ಅವರು ಹೊಂದಿರುವ ಮದ್ಯದಂಗಡಿಗಳು ನವೀಕರಣಗೊಳ್ಳದೆ ಮುಚ್ಚಿವೆ. ಈ ಪೈಕಿ, ಕೆಲವು ಮದ್ಯದಂಗಡಿಗಳ ಪರವಾನಗಿ 1979ರಿಂದಲೂ ನವೀಕರಣ ಆಗಿಲ್ಲ. ಅಂಥವರಿಗೆ ಶುಲ್ಕ ಪಾವತಿಸಿ ಪರವಾನಗಿ ನವೀಕರಿಸಲು ಒಂದು ಬಾರಿಗೆ ಮಾತ್ರ ಒಂದು ತಿಂಗಳ ಅವಕಾಶ ನೀಡಲು ಚಿಂತನೆ ನಡೆದಿದೆ. ಒಂದು ತಿಂಗಳ ಒಳಗೆ ನವೀಕರಿಸಿಕೊಳ್ಳ

ದಿದ್ದರೆ ಪರವಾನಗಿಯನ್ನು ವಾಪಸ್‌ ಪಡೆದು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದೂ ಅವರು ತಿಳಿಸಿದರು.

ಜಿಲ್ಲೆಯೊಂದರಲ್ಲಿ ನಾಲ್ಕು ಜಾಗಗಳನ್ನು ಗುರುತಿಸಿ, ಅಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗುವುದು. ಯಾರು ಬೇಕಾದರೂ ಈ ಪರವಾನಗಿ ಪಡೆಯಲು ಅವಕಾಶವಾಗುವಂತೆ ಮುಕ್ತವಾಗಿ ಹರಾಜು ಪ್ರಕ್ರಿಯೆ ನಡೆಸಲು ಇಲಾಖೆ ಮುಂದಾಗಿದೆ ಎಂದರು.

ಪ್ರತಿ ಮದ್ಯದಂಗಡಿಯ ಹರಾಜಿನಿಂದ ಅಂದಾಜು ₹3 ಕೋಟಿಯಿಂದ ₹4 ಕೋಟಿ ವರೆಗೆ ವರಮಾನ ಬರುವ ನಿರೀಕ್ಷೆಯಿದೆ. ಈ ಪ್ರಸ್ತಾವದ ಬಗ್ಗೆ ಅಬಕಾರಿ ಸಚಿವ

ಆರ್.ಬಿ. ತಿಮ್ಮಾಪುರ ಅವರ ಸಮ್ಮುಖದಲ್ಲಿ ವಿವಿಧ ಹಂತಗಳಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಗಿತಗೊಂಡಿರುವ ಹಂಚಿಕೆಯಾಗದೆ ಉಳಿದಿರುವ ಮದ್ಯದಂಗಡಿಗಳನ್ನು ಹರಾಜು ಮೂಲಕ ಮರು ಹಂಚಿಕೆ ಮಾಡುವ ಪ್ರಸ್ತಾವ ಸಿದ್ಧವಿದೆ. ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ
–ಆರ್‌.ಬಿ. ತಿಮ್ಮಾಪುರ ಅಬಕಾರಿ ಸಚಿವ

ಹರಾಜೋ? ಲಾಟರಿಯೋ? ಸ್ಥ

ಗಿತಗೊಂಡಿರುವ ಮದ್ಯಂಗಡಿಗಳ ನವೀಕರಣಕ್ಕೆ ಒಂದು ತಿಂಗಳ ಅವಕಾಶ ನೀಡಿ ನೋಟಿಸ್‌ ನೀಡಬೇಕೇ ಬೇಡವೇ ಎಂಬ  ಕುರಿತ ಪ್ರಸ್ತಾವವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದ ಬಳಿಕ ಮರು ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈ ಮದ್ಯದಂಗಡಿಗಳನ್ನು ಹರಾಜು ಮೂಲಕ ಮರು ಹಂಚಿಕೆ ಮಾಡಬೇಕೇ ಅಥವಾ ಮೂಲ ದರ ನಿಗದಿ‍ಪಡಿಸಿ ಲಾಟರಿ ಎತ್ತಬೇಕೇ ಎಂಬ ಬಗ್ಗೆಯೂ ಚರ್ಚೆ ನಡೆದಿದ್ದು ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಒಟ್ಟಿನಲ್ಲಿ ಮದ್ಯದಂಗಡಿ ಸನ್ನದು ಪಡೆದುಕೊಳ್ಳಲು ಯಾರು ಬೇಕಾದರೂ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗುವುದು. ಇಂದಿನ ಮಾರುಕಟ್ಟೆ ಮೌಲ್ಯದ ಅಂದಾಜು ಪ್ರಕಾರ ಒಂದು ಮದ್ಯದಂಗಡಿ ಸನ್ನದು ಕನಿಷ್ಠ ₹3 ಕೋಟಿಗೆ ಖರೀದಿ ಆಗಬಹುದು. ಆ ಮೂಲಕ ₹1500 ಕೋಟಿ ಸುಲಭವಾಗಿ ಸರ್ಕಾರಕ್ಕೆ ವರಮಾನ ಬರಬಹುದು ಎಂದು ಅಬಕಾರಿ ಇಲಾಖೆ ಲೆಕ್ಕಾಚಾರ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.