ಬೆಂಗಳೂರು: ‘ನಿಯಮದ ಪ್ರಕಾರವೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಸಿ.ಎ (ನಾಗರಿಕ ಮೂಲಸೌಕರ್ಯ) ನಿವೇಶನ ಹಂಚಿಕೆ ಮಾಡಿದ್ದೇವೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸ್ಪಷ್ಟನೆ ನೀಡಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಸಿ.ಎ ನಿವೇಶನ ಹಂಚಿಕೆಗೆ ಸಂಬಂಧಿಸಿದ ಆರೋಪವನ್ನು ವಾಟ್ಸ್ಆ್ಯಪ್ನಲ್ಲಿ ನಾನು ಗಮನಿಸಿದ್ದೇನೆ. ಯಾರೊ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರಲ್ಲ. ಎಂ.ಬಿ. ಪಾಟೀಲ ಯಡವಟ್ಟು ಮಾಡುವಷ್ಟು ದಡ್ಡರಲ್ಲ’ ಎಂದರು.
‘ಸಿ.ಎ ನಿವೇಶನಕ್ಕೆ ಒಂದು ಬೆಲೆ ನಿಗದಿಪಡಿಸಿದ್ದೇವೆ. ಪ್ರತಿಯೊಂದು ಅರ್ಜಿಯನ್ನೂ ಪರಿಶೀಲಿಸಿದ್ದೇವೆ. ಆನ್ಲೈನ್ ತಂತ್ರಾಂಶ ಅಭಿವೃದ್ಧಿಪಡಿಸಿದ್ದೇವೆ. ಎಸ್ಸಿ, ಎಸ್ಟಿ ಸಮುದಾಯವರಿಗೂ ಶೇ 24ರಷ್ಟು ಕೊಟ್ಟಿದ್ದೇವೆ. ಇಷ್ಟಾಗಿಯೂ ಆರೋಪ ಮಾಡುವವರು, ಏನು ಮಾಡುವುದಾದರೂ ಮಾಡಿಕೊಳ್ಳಲಿ’ ಎಂದು ಸವಾಲು ಹಾಕಿದರು.
ದೂರು: ‘ಕೆಐಎಡಿಬಿ ಸಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಮುಖ್ಯಮಂತ್ರಿಗೆ ದೂರು ನೀಡಿರುವ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ, ‘ಈ ಹಗರಣದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಕೆಐಎಡಿಬಿಯಲ್ಲಿ ನೂರಾರು ಕೋಟಿಯ ಭ್ರಷ್ಟಾಚಾರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.