ADVERTISEMENT

ಉದ್ಯಮ ದಿಗ್ಗಜರ ಜತೆ ಸಚಿವ ಎಂ.ಬಿ. ಪಾಟೀಲ ಮಾತುಕತೆ

ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಮುಂಬೈಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 16:31 IST
Last Updated 19 ಡಿಸೆಂಬರ್ 2023, 16:31 IST
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರಿಗೆ ಸ್ಮರಣಿಕೆ ನೀಡಿದರು. ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಸರ್ಕಾರದ ನಿಯೋಗದ ಭಾಗವಾಗಿದ್ದರು
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರಿಗೆ ಸ್ಮರಣಿಕೆ ನೀಡಿದರು. ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಸರ್ಕಾರದ ನಿಯೋಗದ ಭಾಗವಾಗಿದ್ದರು   

ಬೆಂಗಳೂರು: ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಉದ್ಯಮಿಗಳ ಜೊತೆ ಮಾತುಕತೆಗೆ ಮುಂಬೈಗೆ ತೆರಳಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮಹೀಂದ್ರ, ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಎಸ್‌ಡಬ್ಲ್ಯು), ಟಾಟಾ, ಬ್ಲ್ಯಾಕ್ ಸ್ಟೋನ್ ಮತ್ತು ಆರ್‌ಪಿಜಿ ಗ್ರೂಪ್‌ನ ಪ್ರಮುಖರನ್ನು ಮಂಗಳವಾರ ಭೇಟಿ ಮಾಡಿ ರಾಜ್ಯದಲ್ಲಿರುವ ಹೂಡಿಕೆಗೆ ಪೂರಕವಾದ ನೀತಿ, ಉತ್ತೇಜನ, ಪ್ರೋತ್ಸಾಹಕ ಕ್ರಮಗಳು, ವಿಶೇಷ ರಿಯಾಯಿತಿ, ಇತರ ಸೌಲಭ್ಯಗಳನ್ನು ವಿವರಿಸಿದರು.

ಸಚಿವರು ಮಹೀಂದ್ರ ಸಮೂಹದ ಪರವಾಗಿ ಅದರ ಅಂಗ ಸಂಸ್ಥೆಗಳಾದ ಆಟೋ ಆ್ಯಂಡ್ ಫಾರಂ ವಿಭಾಗದ ಅಧ್ಯಕ್ಷ ವಿನೋದ್ ಸಹಾಯ್, ಜಿಂದಾಲ್ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್ ಮತ್ತು ಪಾರ್ಥ ಜಿಂದಾಲ್, ಟಾಟಾ ಸಮೂಹದ ಮುಖ್ಯಸ್ಥ ಎನ್. ಚಂದ್ರಶೇಖರನ್, ಆರ್‌ಪಿಜಿ ಸಮೂಹದ ಉಪಾಧ್ಯಕ್ಷ ಅನಂತ್ ಗೊಯೆಂಕ ಜೊತೆ ಮಾತುಕತೆ ನಡೆಸಿದರು. 

‘ಕರ್ನಾಟಕವು ಅತ್ಯುತ್ತಮವಾದ ಕೈಗಾರಿಕಾ ನೀತಿ ಹೊಂದಿದ್ದು, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿದ್ಯುನ್ಮಾನ, ಸೆಮಿ ಕಂಡಕ್ಟರ್ ಉತ್ಪಾದನೆ, ಆರೋಗ್ಯ ಸೇವೆಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ, ಮಾನವ ಸಂಪನ್ಮೂಲ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ನೇರ ವಿದೇಶಿ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಸಂಶೋಧನೆ, ಆವಿಷ್ಕಾರ ಮತ್ತು ನಾವೀನ್ಯತೆ ಸೂಚ್ಯಂಕದಲ್ಲಿ ಕೂಡ ಗಮನಾರ್ಹ ಜಾಲವನ್ನು ಹೊಂದಿದೆ. ಈಗಾಗಲೇ ಹೂಡಿಕೆ ಮಾಡಿರುವ ಕಂಪನಿಗಳು ಮತ್ತಷ್ಟು ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಬೇಕು’ ಎಂದು ಉದ್ಯಮಿಗಳಲ್ಲಿ ಸಚಿವರು ಮನವಿ ಮಾಡಿದರು.

ADVERTISEMENT

‘ಬೆಂಗಳೂರಿನ ಸಮೀಪದಲ್ಲಿ ಅತ್ಯಾಧುನಿಕ ಮತ್ತು ವಿಶ್ವ ದರ್ಜೆಯ ಜ್ಞಾನ, ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯ ಸಿಟಿ (ಕೆಎಚ್ಐಆರ್‌ಸಿಟಿ)ಯನ್ನು 2,000 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿಸಲಾಗುತ್ತದೆ. ಇದರ ಜತೆಯಲ್ಲೇ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ಕೊಡುತ್ತಿದೆ. ಒಂಬತ್ತು ಉದ್ಯಮ ವಲಯಗಳನ್ನು ಗುರುತಿಸಿದ್ದು, ಅವುಗಳ ರಚನಾತ್ಮಕ ಅಭಿವೃದ್ಧಿಗೆ ವಿಷನ್ ಗ್ರೂಪ್ಸ್ ರಚಿಸಲಾಗಿದೆ. ಜೊತೆಗೆ ಉದ್ಯಮಿಗಳಿಗೆ ಯಾವುದೇ ಅಡಚಣೆ ಇಲ್ಲದೆ ಏಕಗವಾಕ್ಷಿ ವಿಧಾನದಲ್ಲಿ ಅಗತ್ಯ ಅನುಮತಿಗಳನ್ನೆಲ್ಲ ನೀಡಲಾಗುತ್ತಿದೆ’ ಎಂದೂ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.