ADVERTISEMENT

ದುಡಿವ ಕೈಯಲ್ಲಿ ನವ ಕರ್ನಾಟಕದ ಕೀಲಿ: ‘ನವ ಕರ್ನಾಟಕ ಶೃಂಗ’ದಲ್ಲಿ ಬೊಮ್ಮಾಯಿ

‘‍ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌’ನ ‘ನವ ಕರ್ನಾಟಕ ಶೃಂಗ’ದಲ್ಲಿ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 21:08 IST
Last Updated 19 ಮಾರ್ಚ್ 2023, 21:08 IST
‘ನವ ಕರ್ನಾಟಕ ಶೃಂಗ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು
‘ನವ ಕರ್ನಾಟಕ ಶೃಂಗ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಬೆಂಗಳೂರು: ‘ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದೇ ನವ ಕರ್ನಾಟಕ ಕೀಲಿ ಕೈ. ಅಸಂಘಟಿತ ವಲಯದ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರ ವಿಶೇಷ ಹಣಕಾಸು ಒದಗಿಸಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘‍ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌’ ಭಾನುವಾರ ಆಯೋಜಿಸಿದ್ದ ‘ನವ ಕರ್ನಾಟಕ ಶೃಂಗ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ನೀಡಿದರೆ ನವ ಕರ್ನಾಟಕ ತಾನಾಗಿಯೇ ನಿರ್ಮಾಣವಾಗಲಿದೆ’ ಎಂದರು.

‘ಅಸಂಘಟಿತ ವಲಯದಲ್ಲಿರುವವರಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಂಘಟಿತ ವಲಯಕ್ಕೆ ತರಲು ಪ್ರಾಧಿಕಾರ ಮತ್ತು ಮಂಡಳಿಯನ್ನು ರಚಿಸಲಾ
ಗುತ್ತಿದೆ. ಮೊದಲ ಬಾರಿಗೆ ವಿಶೇಷ ಹಣಕಾಸು ಒದಗಿಸಿದ್ದೇವೆ’ ಎಂದರು.

ADVERTISEMENT

‘ಉದ್ಯೋಗ ವರದಿ ಪಡೆದಿರುವ ಮೊದಲ ರಾಜ್ಯ ಕೂಡ ಕರ್ನಾಟಕವಾಗಿದೆ. ಇಪಿಎಫ್‌ಒ ಮತ್ತು ಇಎಸ್‌ಐ ದಾಖಲೆಗಳನ್ನು ಆಧರಿಸಿ ಉದ್ಯೋಗದ ಲೆಕ್ಕಾಚಾರ ವನ್ನು ಮಾಡಿರುವ ವರದಿಯನ್ನು ನಾವು ಹೊಂದಿದ್ದೇವೆ’ ಎಂದು ಹೇಳಿದರು.

‘ಈ ವರದಿ ಪ್ರಕಾರ, ಕರ್ನಾಟಕವು ಸಂಘಟಿತ ವಲಯದಲ್ಲಿ ಶೇ 25ರಷ್ಟು ಉದ್ಯೋಗ ಕಲ್ಪಿಸಿದೆ. ದೇಶದಲ್ಲಿ ಸರಾ ಸರಿ ಶೇ 20ರಷ್ಟಿದ್ದು, ನಮ್ಮ ರಾಜ್ಯದಲ್ಲಿ ಅದಕ್ಕಿಂತ ಶೇ 5ರಷ್ಟು ಹೆಚ್ಚಿದೆ. ರಾಷ್ಟ್ರ ಮಟ್ಟದಲ್ಲಿ ನಿರುದ್ಯೋಗ ಪ್ರಮಾಣ ಶೇ 4.7ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 2.4ರಷ್ಟಿದೆ. ಇದೆಲ್ಲವನ್ನೂ ನೋಡಿದರೆ ಕರ್ನಾಟಕ ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದು ಸ್ಪಷ್ಟ’ ಎಂದು ಅವರು ಹೇಳಿದರು.

ಉದ್ಯೋಗ ನೀತಿಯನ್ನು ತಂದಿರುವ ಮೊದಲ ರಾಜ್ಯ ಕೂಡ ಕರ್ನಾಟಕ. ಕೈಗಾರಿಕೆಗಳು ನೀಡುವ ಉದ್ಯೋಗದ ಸಂಖ್ಯೆಯನ್ನು ಆಧರಿಸಿ ಅವರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ದುಡಿಯುವ ವರ್ಗದ ಜನರಿಲ್ಲದೆ ನವ ಕರ್ನಾಟಕ ನಿರ್ಮಾಣ ಸಾಧ್ಯವೇ ಇಲ್ಲ. ಬದಲಾವಣೆ ಮಾಡುವ ಶಕ್ತಿ ಇರುವುದು ಕಾರ್ಮಿಕರು ಮತ್ತು ರೈತರಿಗೆ ಮಾತ್ರ. ಕಾರ್ಮಿಕರ ಶ್ರಮ ಮತ್ತು ರೈತರ ಬೆವರಿನಲ್ಲಿ ಅಭಿವೃದ್ಧಿ ಇದೆ ಎಂಬುದನ್ನು ನಂಬಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಿಸಿದರು.

ವಿಮಾನ ತಯಾರಿಕೆ ಘಟಕ

ಕರ್ನಾಟಕದಲ್ಲಿ ವಿಮಾನ ತಯಾರಿಕಾ ಘಟಕ ತೆರೆಯುವ ಸಂಬಂಧ ಕೆಲವೇ ದಿನಗಳಲ್ಲಿ ಒಪ್ಪಂದ ಏರ್ಪಡಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ನವ ಕರ್ನಾಟಕ ನಿರ್ಮಾಣದಲ್ಲಿ ಇದು ನನ್ನ ಕನಸು. ಸದ್ಯ ಮಾತುಕತೆ ನಡೆಯುತ್ತಿದ್ದು, ನಾಲ್ಕೈದು ತಿಂಗಳಲ್ಲಿ ಒಪ್ಪಂದ ನಡೆಯಲಿದೆ’ ಎಂದರು.

ವಿಜಯಪುರ ಮತ್ತು ರಾಯಚೂರಿನಲ್ಲಿ ಹತ್ತಿ ಬೆಳೆಯುವ ಪ್ರದೇಶಗಳಿವೆ. ಅಲ್ಲಿ ಜವಳಿ ಘಟಕಗಳನ್ನು ಸ್ಥಾಪಿಸಲು ಪಿಎಂ-ಮಿತ್ರ ಮಾದರಿಯ ಯೋಜನೆಗೆ ನಮ್ಮ ಸರ್ಕಾರ ಅನುಮೋದನೆ ನೀಡಲಿದೆ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.