ADVERTISEMENT

'ಮುಡಾ’ ಹಗರಣ: ಸಿಬಿಐ ತನಿಖೆಗೆ ಎನ್. ರವಿಕುಮಾರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 10:05 IST
Last Updated 5 ಅಕ್ಟೋಬರ್ 2024, 10:05 IST
ಎನ್. ರವಿಕುಮಾರ್‌
ಎನ್. ರವಿಕುಮಾರ್‌   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್‌ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ತಮ್ಮ ನಿವೇಶನಗಳಿಗೂ ಸಂಚಕಾರ ಬರಬಹುದು ಎಂಬ ಭಯ ಅವರನ್ನು ಕಾಡುತ್ತಿರಬಹುದು’ ಎಂದರು. 

ದಸರಾ ಮಹೋತ್ಸವ ಉದ್ಘಾಟಿಸಿದ ಸಾಹಿತಿ ಹಂಪ ನಾಗರಾಜಯ್ಯ ಅವರು ಸಾಹಿತ್ಯ, ದಸರಾ, ಮೈಸೂರು ರಾಜರ ಸಾಧನೆಗಳ ಕುರಿತು ಮಾತನಾಡಬೇಕಿತ್ತು. ಆದರೆ, ಅವರು  ಸಿದ್ದರಾಮಯ್ಯ ಹಾಗೂ ಸರ್ಕಾರದ ಹೊಗಳುಭಟರಂತೆ ಭಾಷಣ ಮಾಡಿದ್ದಾರೆ. ಇದು ದಸರಾ ಇತಿಹಾಸಕ್ಕೇ ಕಪ್ಪುಚುಕ್ಕಿ ಎಂದು ಟೀಕಿಸಿದರು.

ADVERTISEMENT

ಸ್ವಾತಂತ್ರ್ಯಕ್ಕಾಗಿ ಹೋರಾಡಿ 28 ವರ್ಷ ಜೈಲುವಾಸ ಅನುಭವಿಸಿದ ಸಾವರ್ಕರ್‌ ಅವರ ಕುರಿತು ಟೀಕಿಸಿದ ಸಚಿವ ದಿನೇಶ್‌ ಗುಂಡೂರಾವ್‌ ಕ್ಷಮೆ ಯಾಚಿಸಬೇಕು. ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.