ಹುಬ್ಬಳ್ಳಿ: ‘ದೇಶದ ಪ್ರತಿ ಬೀದಿ, ಗಲ್ಲಿಗಳಲ್ಲಿ ದಂಗೆ ಎಬ್ಬಿಸುವ ಎಲ್ಲ ಸಾಧ್ಯತೆಗಳು ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಇವೆ’ ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಮುಸ್ಲಿಂ ವಕೀಲರ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಬಾಬರಿ ಮಸೀದಿಯಂತಹ ವಿವಾದಿತ ಪ್ರಕರಣಗಳು ಇತ್ಯರ್ಥಗೊಂಡ ಬಳಿಕ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಬಳಸಿಕೊಳ್ಳಲು ಬೇರೆ ವಿಚಾರಗಳಿಲ್ಲ. ಹೀಗಾಗಿ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ’ ಎಂದು ಆರೋಪಿಸಿದರು.
‘ವಕ್ಫ್ ಕಾಯಿದೆ ವಿರುದ್ಧ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ. ಕೆಲವು ಪ್ರಮುಖ ಮಾಧ್ಯಮಗಳ ಜನಪ್ರಿಯ ನಿರೂಪಕರೂ ಇದೇ ಕಾರ್ಯದಲ್ಲಿ ತೊಡಗಿದ್ದಾರೆ. ಉದ್ದೇಶಿತ ಮಸೂದೆಗೆ ವಿರುದ್ಧವಾಗಿ ಹೆಚ್ಚಿನ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಕೇಂದ್ರ ಸರ್ಕಾರಕ್ಕೆ ಆತಂಕ ಉಂಟಾಗಿದೆ. ಆದ್ದರಿಂದ ಮುಸ್ಲಿಮರಲ್ಲಿಯೇ ಇರುವ ಒಂದಿಷ್ಟು ಸಮಯ ಸಾಧಕರನ್ನು ಮಸೂದೆ ಪರ ಮಾತನಾಡುವಂತೆ ಕುತಂತ್ರ ರೂಪಿಸುತ್ತಿದ್ದಾರೆ’ ಎಂದು ಜಂಟಿ ಸದನ ಸಮಿತಿ ಸದಸ್ಯರೂ ಆಗಿರುವ ಅವರು ದೂರಿದರು.
ಸುಪ್ರೀಂ ಕೋರ್ಟ್ ವಕೀಲ ಮೆಹಮೂದ್ ಎಸ್. ಪ್ರಾಚಾ ಮಾತನಾಡಿ, ‘ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಲ್ಲ, ಆರ್ಎಸ್ಎಸ್ ಪ್ರೇರಿತ ವಕ್ಫ್ ತಿದ್ದುಪಡಿ ಕಾಯಿದೆಯಿಂದ ಮುಸ್ಲಿಮರಿಗೆ ತೊಂದರೆ ಆಗುವುದು ಮಾತ್ರವಲ್ಲ, ಈ ಕಾಯಿದೆ ಮಾದರಿ ಇಟ್ಟುಕೊಂಡು ಉಳಿದ ಸಮುದಾಯಗಳಿಗೂ ಸಂಬಂಧಿಸಿ ಮುಂದಿನ ದಿನಗಳಲ್ಲಿ ಕಾಯಿದೆ ಬರಲಿದೆ’ ಎಂದು ಎಚ್ಚರಿಸಿದರು.
‘ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ ಆರ್ಎಸ್ಎಸ್ ಬಳಿ ಇದೆ. ಅವರ ಸುಳ್ಳಿನ ವಿರುದ್ಧ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳು ಒಗ್ಗೂಡಿ ಹೋರಾಡದೇ ಹೋದಲ್ಲಿ ನ್ಯಾಯ ಸಿಗುವುದು ಸಾಧ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.