ADVERTISEMENT

ದಸರಾ ಮೊದಲ ದಿನವೇ ಘಜ್ನಿ ಮಹಮದ್ ಸಂಸ್ಕೃತಿ ಮೆರೆದ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 9:35 IST
Last Updated 3 ಅಕ್ಟೋಬರ್ 2024, 9:35 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: 'ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ಕುಖ್ಯಾತಿಯ ಘಜ್ನಿ ಮಹಮದ್‌ನ ಸಂಸ್ಕೃತಿಯನ್ನು ನಾಡ ಹಬ್ಬ ದಸರೆಯ ಸಂದರ್ಭದಲ್ಲಿ ಮೆರೆದು ಕನ್ನಡ ನಾಡಿನ ಮಹನೀಯರನ್ನು ಅವಮಾನಿಸಿದೆ. ಇದು ನಾಡಹಬ್ಬಕ್ಕೆ ಬಳಿದ ಕಪ್ಪುಮಸಿಯಾಗಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಅವರು 'ಕಾಂಗ್ರೆಸ್ ಸರ್ಕಾರ ದಸರೆಯ ಮೊದಲ ದಿನವೇ ಘಜ್ನಿ ಮಹಮದ್ ಸಂಸ್ಕೃತಿ ಮೆರೆದಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

'ಈ ಹಿಂದೆ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಒಂದು ಭಾಗವಾಗಿರುವ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ನಾಡಿನ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಇದನ್ನು ಆಸ್ವಾದಿಸಲು ಬರುವ ಪ್ರೇಕ್ಷಕ ವೃಂದಕ್ಕೆ ಕನ್ನಡ ನಾಡು, ನುಡಿ, ಪರಂಪರೆಗೆ ಮಹಾನ್ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಅಳವಡಿಸಲಾಗುತ್ತಿತ್ತು' ಎಂದು ಅವರು ಉಲ್ಲೇಖಿಸಿದ್ದಾರೆ.

'ಪುರಂದರದಾಸರು, ಕನಕದಾಸರು, ದ.ರಾ ಬೇಂದ್ರೆ, ಕುವೆಂಪು, ಡಾ.ರಾಜ್ ಕುಮಾರ್, ವಿ.ಕೃ ಗೋಕಾಕ್, ಟಿ.ಎನ್. ಬಾಲಕೃಷ್ಣ, ಸಂಗೀತ ದಿಗ್ಗಜರುಗಳಾದ ವಾಸುದೇವಾಚಾರ್ಯ, ಪಿಟೀಲು ಚೌಡಯ್ಯ ಇಂತಹ ಅನೇಕ ಮಹನೀಯರ ನಾಮಫಲಕಗಳನ್ನು ಅಳವಡಿಸಿ ವಸ್ತು ಪ್ರದರ್ಶನಕ್ಕೆ ಬರುವವರಿಗೆ ಅವರನ್ನು ಸ್ಮರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿತ್ತು' ಎಂದು ಹೇಳಿದ್ದಾರೆ.

'ಮಾಜಿ ಮೇಯರ್ ಅಯೂಬ್ ಖಾನ್ ಅವರನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ ನೇಮಿಸಿದ್ದು ಇದೀಗ ನಾಡಹಬ್ಬ ದಸರೆಯ ನವರಾತ್ರಿಯ ಆರಂಭದ ದಿನವೇ ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಮಹಾನ್ ಕೊಡುಗೆ ಕೊಟ್ಟ ಮಹಾನ್ ಸಾಧಕ ಮಹನೀಯರುಗಳ ಸ್ಮರಿಸುವ ಫಲಕಗಳನ್ನೆಲ್ಲ ಕಿತ್ತೆಸೆದು ಘಜ್ನಿ ಸಂಸ್ಕೃತಿಯನ್ನು ಮೆರೆಸಲಾಗಿದೆ' ಎಂದು ಆರೋಪಿಸಿದ್ದಾರೆ.

'ಈ ಕೂಡಲೇ ಇದ್ದ ಸ್ಥಳದಲ್ಲೇ ನಾಮಫಲಕಗಳನ್ನು ಅಳವಡಿಸಿ ರಾಜ್ಯ ಸರ್ಕಾರ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಗೂ ಅವರ ನೆರಳಿನಲ್ಲೇ ನಡೆದಿರುವ ದುಷ್ಕೃತ್ಯದ ಹೊಣೆ ಹೊರಬೇಕು ಹಾಗೂ ಜನರ ಕ್ಷಮೆಯಾಚಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.