ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಸುದೀರ್ಘ 30 ತಾಸು ಶೋಧ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ವಿಚಾರಣೆ ಪೂರ್ಣಗೊಳಿಸಿ, ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಹೊತ್ತೊಯ್ದಿದೆ.
ದಾಳಿಯ ಎರಡನೇ ದಿನವಾದ ಶನಿವಾರ ಬೆಳಿಗ್ಗೆ 10ಕ್ಕೆ ವಿಚಾರಣೆ ಆರಂಭಿಸಿದ್ದ ಇ.ಡಿ.ಯ 12 ಅಧಿಕಾರಿಗಳ ತಂಡವು ಸತತ 17 ತಾಸು ಶೋಧದ ಬಳಿಕ ಭಾನುವಾರ ನಸುಕಿನಲ್ಲಿ 2.45ರ ಸುಮಾರಿಗೆ ಮುಡಾ ಕಚೇರಿ ಬಾಗಿಲು ತೆರೆದು ಹೊರಬಂದಿತು. ದಾಖಲೆಗಳನ್ನು ತುಂಬಿದ ಮೂರು ಕೆಂಪು ಬ್ಯಾಗ್ ಹಾಗೂ ಎರಡು ಹಾರ್ಡ್ಡಿಸ್ಕ್ ಹಿಡಿದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ದಾಖಲಾದ ‘ಇಸಿಐಆರ್’ ಆಧರಿಸಿ ಅ. 18ರಂದು ಬೆಳಿಗ್ಗೆ 10.30ರ ವೇಳೆಗೆ ಮುಡಾ ಕಚೇರಿಗೆ ಇ.ಡಿ. ಅಧಿಕಾರಿಗಳ ತಂಡವು ದಾಳಿ ನಡೆಸಿದ್ದು, ರಾತ್ರಿ 11ರವರೆಗೂ ಶೋಧ ಮುಂದುವರಿಸಿತ್ತು. ಬಳಿಕ ಮುಡಾ ಕಚೇರಿಯಲ್ಲೇ ವಾಸ್ತವ್ಯ ಹೂಡಿತ್ತು.
ಇದೇ ವೇಳೆ ಮೈಸೂರು ತಾಲ್ಲೂಕು ಕಚೇರಿ ಹಾಗೂ ಬೆಂಗಳೂರಿನ ಕೆಂಗೇರಿಯಲ್ಲಿರುವ ಜೆ. ದೇವರಾಜು ಅವರ ನಿವಾಸದಲ್ಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಇ.ಡಿ. ಸಂಗ್ರಹಿಸಿದ್ದು, ಅವುಗಳನ್ನು ಡಿಜಿಟಲ್ ರೂಪದಲ್ಲೂ ಪಡೆದಿದೆ. ಸಿದ್ದರಾಮಯ್ಯ ಪತ್ನಿ ಮುಡಾಕ್ಕೆ ಬರೆದಿದ್ದ ವೈಟ್ನರ್ ಹಚ್ಚಿದ ಪತ್ರ ಸಹ ಇದರಲ್ಲಿ ಸೇರಿದೆ. ದೇವನೂರು ಬಡಾವಣೆಯ ನಕ್ಷೆ, ಅಲ್ಲಿ ಹಂಚಿಕೆಯಾದ ಹಾಗೂ ಲಭ್ಯವಿರುವ ನಿವೇಶನಗಳ ಮಾಹಿತಿಯನ್ನು ಅಧಿಕಾರಿಗಳು ಮುಡಾ ಆಯುಕ್ತರಿಂದ ಕೇಳಿ ಪಡೆದಿದ್ದಾರೆ. 50:50 ಅನುಪಾತದಲ್ಲಿ ಮುಡಾದಲ್ಲಿ ಈಚಿನ ವರ್ಷಗಳಲ್ಲಿ ಹಂಚಿಕೆಯಾದ ಎಲ್ಲ ನಿವೇಶನಗಳ ದಾಖಲಾತಿಯನ್ನು ಸಂಗ್ರಹಿಸಿದ್ದಾರೆ.
ಮೊಬೈಲ್ ಫೋನ್ ಶೋಧ:
ಮುಡಾದ ಈ ಹಿಂದಿನ ಆಯುಕ್ತರಾದ ಡಿ.ಟಿ. ನಟೇಶ್ ಹಾಗೂ ಜಿ.ಟಿ. ದಿನೇಶ್ಕುಮಾರ್ ಅವರಿಗೆ ಆಪ್ತ ಸಹಾಯಕರಾಗಿದ್ದ ಮೂವರು ಸಿಬ್ಬಂದಿಯ ಮೊಬೈಲ್ ಫೋನ್ಗಳನ್ನು ಇ.ಡಿ. ತಂಡ ವಶಕ್ಕೆ ಪಡೆದಿತ್ತು. ಸುಮಾರು 10 ಗಂಟೆವರೆಗೆ ಮೊಬೈಲ್ಗಳನ್ನು ಅಧಿಕಾರಿಗಳ ತಂಡವು ಶೋಧಿಸಿದ್ದು, ಮೊಬೈಲ್ ಕರೆಗಳು, ವಾಟ್ಸ್ಅಪ್ ಸಂದೇಶಗಳು ಮೊದಲಾದ ಮಾಹಿತಿಯನ್ನು ಹೆಕ್ಕಿ ತೆಗೆದಿದೆ. ನಂತರ ಫೋನ್ಗಳನ್ನು ಹಿಂತಿರುಗಿಸಲಾಗಿದೆ.
ಸದ್ಯ ಇ.ಡಿ. ಅಧಿಕಾರಿಗಳು ವಾಪಸ್ ಆಗಿದ್ದರಿಂದ ಮುಡಾ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ಎಂದಿನಂತೆ ಮುಡಾ ಕಚೇರಿ ಕಾರ್ಯನಿರ್ವಹಿಸಲಿದೆ. ಇ.ಡಿ. ದಾಳಿ ಕಾರಣದಿಂದ ಮುಡಾಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಪ್ರಾಧಿಕಾರದ ಇತಿಹಾಸದಲ್ಲೇ ಇಷ್ಟು ಸುದೀರ್ಘ ದಾಳಿ ಇದೇ ಮೊದಲ ಬಾರಿಯಾಗಿದೆ.
ಇ.ಡಿ. ಅಧಿಕಾರಿಗಳು ಮುಡಾ ಕಚೇರಿಯಲ್ಲಿ ಪರಿಶೀಲನೆ ಮುಗಿಸಿದ್ದು ಅವರು ಕೇಳಿದ ಎಲ್ಲ ಮಾಹಿತಿ ನೀಡಿದ್ದೇವೆ. ಸೋಮವಾರ ಎಂದಿನಂತೆ ಕಚೇರಿ ಕಾರ್ಯ ನಿರ್ವಹಿಸಲಿದೆರಘುನಂದನ್ ಮುಡಾ ಆಯುಕ್ತ
ಒಂದೆರಡು ದಿನದಲ್ಲೇ ಸಿದ್ದರಾಮಯ್ಯ ವಿಚಾರಣೆ?
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಪೊಲೀಸರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ಮೊದಲೆರಡು ಆರೋಪಿಗಳಾಗಿರುವ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಶೀಘ್ರದಲ್ಲೇ ನೋಟಿಸ್ ಜಾರಿಯಾಗಲಿದ್ದು ಒಂದೆರಡು ದಿನದಲ್ಲೇ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಮುಡಾ ಕಚೇರಿಯಲ್ಲಿ ಶೋಧ ಕಾರ್ಯ ಮುಗಿಸಿರುವ ಇ.ಡಿ. ಅಧಿಕಾರಿಗಳ ತಂಡವು ಪ್ರಕರಣದ 4ನೇ ಆರೋಪಿ ದೇವರಾಜು ಮನೆ ಮೇಲೆ ಈಗಾಗಲೇ ದಾಳಿ ನಡೆಸಿದೆ. ಉಳಿದ ಮೂವರು ಆರೋಪಿಗಳಾದ ಸಿದ್ದರಾಮಯ್ಯ ಕುಟುಂಬಸ್ಥರಿಗೆ ಇ.ಡಿಯಿಂದಲೂ ಶೀಘ್ರದಲ್ಲೇ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭೇಟಿ ನೀಡುತ್ತಿದ್ದು ಮಂಗಳವಾರ ವರುಣ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.