ಬೆಂಗಳೂರು: ‘ಹಾಲಿನ ದರ ಹೆಚ್ಚಾಗಿಲ್ಲ. ಅರ್ಧ ಲೀಟರ್ ಪ್ಯಾಕ್ನಲ್ಲಿ ಹಾಲಿನ ಪ್ರಮಾಣವನ್ನು 50 ಮಿ.ಲೀ ಹೆಚ್ಚು ಮಾಡಿದ್ದು, ಆ ಪ್ರಮಾಣಕ್ಕೆ ತಕ್ಕಂತೆ ₹ 2.10 ಹೆಚ್ಚು ಬೆಲೆ ನಿಗದಿ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲು ಉತ್ಪಾದನೆ ಹೆಚ್ಚಾಗಿದ್ದು, ಅದನ್ನು ಗ್ರಾಹಕರಿಗೆ ನೀಡಿ ಅದಕ್ಕೆ ತಕ್ಕ ದರವನ್ನಷ್ಟೇ ನಿಗದಿ ಮಾಡಿದ್ದೇವೆ ಎಂದರು.
ಹೊಟೇಲ್ ಮಾಲೀಕರ ಸಂಘದವರು ಸಭೆ ಸೇರಿ ಕಾಫಿ, ಚಹ ದರ ಹೆಚ್ಚಿಸುವ ಕುರಿತು ಚರ್ಚಿಸಿದ ವಿಷಯವನ್ನು ಸಿದ್ದರಾಮಯ್ಯ ಅವರ ಗಮನ ಸೆಳೆದಾಗ, ‘ಹೇಗೆ ಹೆಚ್ಚಿಸುತ್ತಾರೆ. ಹಾಲಿನ ದರ ಏರಿದ್ದರೆ ಮಾತ್ರ ಹೆಚ್ಚಿಸಬೇಕು. ನಾವು ಬೆಲೆ ಹೆಚ್ಚಿಸಿಲ್ಲ. ಹೆಚ್ಚು ಹಾಲು ಸೇರಿಸಿ, ಅದಕ್ಕೆ ತಕ್ಕ ಬೆಲೆ ನಿಗದಿ ಮಾಡಿದ್ದೇವೆ’ ಎಂದರು.
ಹಾಲು ಉತ್ಪಾದನೆ ಹೆಚ್ಚಾಗಿರುವುದರಿಂದ ಹಾಲನ್ನು ರೈತರಿಂದ ಕೊಳ್ಳಬೇಕೆ ಹೊರತು ಚೆಲ್ಲಲಾಗುವುದಿಲ್ಲ. ಕೊಳ್ಳುವವರಿಗೆ ಹಾಲು ಹೆಚ್ಚು ದೊರಕುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.