ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಶುಕ್ರವಾರ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು. ಅವರು ಮೇ 19ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ.
ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಯಾರನ್ನೂ ದ್ವೇಷ ಮಾಡದಂತಹ ಹೃದಯವಂತಿಕೆ ಬೆಳಸಿಕೊಳ್ಳಬೇಕು. ಎಂದೂ ಮಾಸದ ಮುಗುಳ್ನಗೆ ಹಾಗೂ ಯಾರಿಗೂ ನೋವನ್ನುಂಟು ಮಾಡದ ನಡೆ ನಿಮ್ಮದಾಗಿರಬೇಕು’ ಎಂದು ವಕೀಲರಿಗೆ ಹೇಳಿದರು.
‘ಎಲ್ಎಲ್ಬಿ ಅಧ್ಯಯನ ಮಾಡುತ್ತಿದ್ದಾಗ, ನಾನು ವಕೀಲಿ ವೃತ್ತಿ ಕೈಗೊಳ್ಳುತ್ತೇನೆ ಅಂದುಕೊಂಡಿರಲಿಲ್ಲ. ವಕೀಲಿಕೆ ಆರಂಭಿಸಿದ ನಂತರ, ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಊಹಿಸದ ನಾನು ಸಣ್ಣ ನ್ಯಾಯಾಲಯದಿಂದ ಆರಂಭಿಸಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದಗೇರಿದೆ’ ಎಂದು ಮೆಲುಕು ಹಾಕಿದರು.
ಕೊಡಗಿನವರಾದ ನ್ಯಾಯಮೂರ್ತಿ ಬೋಪಣ್ಣ, 1984ರ ನವೆಂಬರ್ 21ರಂದು ಅಡ್ವೊಕೇಟ್ ಆಗಿ ವೃತ್ತಿ ಜೀವನ ಆರಂಭಿಸಿದರು. ಸಿವಿಲ್, ಸಾಂವಿಧಾನಿಕ, ಕಂಪನಿ ಹಾಗೂ ಸೇವಾ ವಿಷಯಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ವಕಾಲತ್ತು ನಿರ್ವಹಿಸಿದ ಅವರಿಗೆ 2006ರಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು. 2007ರ ಮಾರ್ಚ್ 1ರಂದು ಅವರು ಹೈಕೋರ್ಟ್ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
2018ರ ಅಕ್ಟೋಬರ್ 29ರಂದು ಗುವಾಹಟಿ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಯಾಗಿ, ಅದೇ ವರ್ಷ ಮೇ 24ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದನ್ನೋತಿ ಹೊಂದಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.