ADVERTISEMENT

ಸಚಿವ ಕೆ.ಎಚ್‌. ಮುನಿಯಪ್ಪ ಅಳಿಯನಿಗಾಗಿ ‘ಕಾರ್ಯದರ್ಶಿ –2’ ಹುದ್ದೆ?

‘ಗಣಕ ಘಟಕ’ದ ಅಧಿಕಾರಿಗೆ ಬಡ್ತಿ- ಸಚಿವಾಲಯ ನೌಕರರ ಸಂಘದ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:14 IST
Last Updated 20 ಜುಲೈ 2024, 15:14 IST
ಸಚಿವ ಕೆ.ಎಚ್‌. ಮುನಿಯಪ್ಪ
ಸಚಿವ ಕೆ.ಎಚ್‌. ಮುನಿಯಪ್ಪ   

ಬೆಂಗಳೂರು: ವಿಧಾನಸಭೆಗೆ ಹೊಸತಾಗಿ ಸೃಜಿಸಿರುವ ‘ಕಾರ್ಯದರ್ಶಿ– 2’ ಹುದ್ದೆಗೆ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರ ಅಳಿಯ, ಕೆಜಿಎಫ್‌ ಶಾಸಕಿ ರೂಪಾ ಅವರ ಪತಿ, ಗಣಕ ಘಟಕ ನಿರ್ದೇಶಕ ಶಶಿಧರ್‌ ಅವರಿಗೆ ಬಡ್ತಿ ನೀಡಲು ವಿಧಾನಸಭೆ ಸಚಿವಾಲಯ ಮುಂದಾಗಿದೆ.

ಆದರೆ, ಸಚಿವಾಲಯದಲ್ಲಿ ಸಾಮಾನ್ಯ ಘಟಕದಿಂದ ಬಡ್ತಿ ನೀಡಬೇಕಾದ, ಹೊಸತಾಗಿ ಸೃಜಿಸಿದ ಹುದ್ದೆಗೆ ಗಣಕ ವಿಭಾಗದ ಅಧಿಕಾರಿಗೆ ಬಡ್ತಿ ನೀಡಲು ಮುಂದಾಗಿರುವುದಕ್ಕೆ ವಿಧಾನಸಭೆ ಸಚಿವಾಲಯ ನೌಕರರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಏನಿದು ಗೊಂದಲ?:‌

ಕಾರ್ಯದರ್ಶಿ– 2 ಹುದ್ದೆ ಸೃಜಿಸುವ ಸಂಬಂಧ ವಿಧಾನಸಭೆ ಸಚಿವಾಲಯವು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದುಕೊಂಡಿದ್ದು, ವಿಶೇಷ ಮಂಡಳಿಯ ಒಪ್ಪಿಗೆ ಸಿಗಬೇಕಿದೆ. ಹುದ್ದೆ ಸೃಜಿಸಲು ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮದ ತಿದ್ದುಪಡಿಯೂ ಆಗಬೇಕಿದೆ. ಈ ಮಧ್ಯೆ, ಶಶಿಧರ್ ಅವರಿಗೆ ಬಡ್ತಿ ನೀಡುವ ಉದ್ದೇಶದಿಂದಲೇ ಈ ಹುದ್ದೆಯನ್ನು ಸೃಜಿಸಲಾಗುತ್ತಿದೆ ಎಂಬ ಆರೋಪ ಎದುರಾಗಿದೆ.

ADVERTISEMENT

ವಿಧಾನಸಭಾ ಸಚಿವಾಲಯದಲ್ಲಿ ಗಣಕ, ಸಾಮಾನ್ಯ (ಮುಖ್ಯ ವಾಹಿನಿ), ಗ್ರಂಥಾಲಯ, ವರದಿಗಾರರು, ಕಣ್ಗಾವಲು, ಹೆಲ್ತ್‌ ಕ್ಲಬ್‌, ವಾಹನ ಮೇಲ್ವಿಚಾರಕರು ಹೀಗೆ ಹಲವು ಘಟಕಗಳಿವೆ. ಈ ಘಟಕಗಳಿಗೆ ನೇಮಕಗೊಳ್ಳುವವರು ಆಯಾ ಘಟಕದಲ್ಲಿಯೇ ಬಡ್ತಿ ಪಡೆದು ನಿವೃತ್ತರಾಗಬೇಕು. ಒಂದು ಘಟಕಕ್ಕೆ ನೇಮಕಗೊಂಡು ಇನ್ನೊಂದು ಘಟಕದಲ್ಲಿ ಕೆಲಸ ಮಾಡಲು ಅಥವಾ ಬಡ್ತಿ ಪಡೆಯಲು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅವಕಾಶ ಇಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹೀಗಾಗಿ, ಸಾಮಾನ್ಯ ಘಟಕದಲ್ಲಿ ಹೊಸತಾಗಿ ಸೃಜಿಸುವ ಕಾರ್ಯದರ್ಶಿ– 2 ಹುದ್ದೆಗೆ ಅದೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ ಬಡ್ತಿ ನೀಡಬೇಕು. ಗಣಕ ಘಟಕದ ಅಧಿಕಾರಿಗೆ ಬಡ್ತಿ ನೀಡಿ, ಆ ಹುದ್ದೆಗೆ ಪರಿಗಣಿಸಲು ಅವಕಾಶ ಇಲ್ಲ. ಗಣಕ ಘಟಕದ ನಿರ್ದೇಶಕರಾಗಿರುವ ಶಶಿಧರ್‌ ಅವರಿಗಿಂತ ಜ್ಯೇಷ್ಠತೆಯಲ್ಲಿ ಕಿರಿಯರು ಸಾಮಾನ್ಯ ಘಟಕದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈ ಕಾರಣಕ್ಕೆ ಸಾಮಾನ್ಯ ಘಟಕದಲ್ಲಿ ಇನ್ನೊಂದು ಕಾರ್ಯದರ್ಶಿ ಹುದ್ದೆ ಸೃಜಿಸಿ, ಅವರಿಗೆ ಬಡ್ತಿ ನೀಡಲು ಉದ್ದೇಶಿಸಲಾಗಿದೆ’ ಎಂದೂ ಅವರು ಹೇಳಿದರು.

‘ಸಾಮಾನ್ಯ ಘಟಕದಿಂದ ಬಡ್ತಿ ನೀಡಬೇಕು’

‘ಕಾರ್ಯದರ್ಶಿ – 2 ಹುದ್ದೆಗೆ ಸಾಮಾನ್ಯ ಘಟಕದಿಂದ ಮುಂಬಡ್ತಿ ನೀಡಬೇಕು’ ಎಂದು ಆಗ್ರಹಿಸಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಮತ್ತು ಕಾರ್ಯದರ್ಶಿ ಕೆ. ವಿಶಾಲಾಕ್ಷಿ ಅವರಿಗೆ ವಿಧಾನಸಭೆ ಸಚಿವಾಲಯ ನೌಕರರ ಸಂಘ ಮನವಿ ಸಲ್ಲಿಸಿದೆ.

ವಿಧಾನಸೌಧದ ಆವರಣದಲ್ಲಿ ಸಂಘದ ಸದಸ್ಯರು ಶನಿವಾರ ಸಭೆ ನಡೆಸಿದರು.

‘ಸಾಮಾನ್ಯ ಘಟಕದಿಂದ ಬಡ್ತಿ ನೀಡಬೇಕಾದ ಹುದ್ದೆಗೆ ಗಣಕ ಘಟಕದ ಅಧಿಕಾರಿಯನ್ನು ಪರಿಗಣಿಸಲು ಕೆಲವು ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಸಭಾಧ್ಯಕ್ಷರನ್ನೂ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದ ಸಂಘದ ಅಧ್ಯಕ್ಷ ಎನ್‌.ಜೆ. ಮೋಹನ್‌ ಕುಮಾರ್‌, ‘ಈ ರೀತಿ ಮಾಡಿದರೆ ಮುಂದಿನ ದಿನಗಳಲ್ಲಿ ಸಾಮಾನ್ಯ ಘಟಕದ ಸುಮಾರು 700 ನೌಕರರಿಗೆ ಅನ್ಯಾಯ ಆಗಲಿದೆ’ ಎಂದರು.

‘ತಂತ್ರಾಂಶ ಅಭಿವೃದ್ಧಿ ಕೆಲಸ ಮಾಡುವ ಗಣಕ ಘಟಕದ ನೌಕರರು, ಅಧಿಕಾರಿಗಳು, ಸಾಮಾನ್ಯ ಘಟಕದ ಸಿಬ್ಬಂದಿ, ನೌಕರರು ಮಾಡುವ ಶಾಸನ ರಚನೆ, ವಿವಿಧ ಸಮಿತಿಗಳು ಹಾಗೂ ಅಧಿವೇಶನದಲ್ಲಿ ಪ್ರಶ್ನೋತ್ತರ ತಯಾರಿ ಮುಂತಾದ ಕೆಲಸಗಳನ್ನು ಮಾಡಲು ಸಾಧ್ಯವೇ? ಗಣಕ ಘಟಕದಲ್ಲಿಯೇ ಉನ್ನತ ಹುದ್ದೆ ಸೃಜಿಸಿ ಬಡ್ತಿ ನೀಡಲಿ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಸಾಮಾನ್ಯ ಘಟಕದ ಹುದ್ದೆಗೆ ಗಣಕ ಘಟಕದ ಅಧಿಕಾರಿಯನ್ನು ಪರಿಗಣಿಸಬಾರದು. ಸಭಾಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಈ ಕುರಿತು ಮನವರಿಕೆ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.