ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧೆಡೆ ಪಾನಿಪುರಿ ಹಾಗೂ ಮಸಾಲಪುರಿ ಮಾದರಿಗಳನ್ನು ಪರಿಶೀಲಿಸಿದ್ದು, ಇವುಗಳಿಗೆ ಬಳಸುವ ಪದಾರ್ಥದಲ್ಲಿ ಕೃತಕ ಬಣ್ಣ ಬಳಸುವುದು ದೃಢಪಟ್ಟಿದೆ.
ಸಂಗ್ರಹಿಸಲಾದ 260 ಮಾದರಿಗಳಲ್ಲಿ 41 ಮಾದರಿಗಳು ಅಸುರಕ್ಷಿತವೆಂದು ವರದಿ ಬಂದಿದ್ದು, ಕೃತಕ ಬಣ್ಣ ಬಳಸಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಖಟ್ಟಾ-ಮೀಠಾ ಸಾಸ್ನಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಅಂಶ ಪತ್ತೆಯಾಗಿದೆ. 18 ಮಾದರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಇನ್ನೂ 4–5 ಮಾದರಿಗಳ ಫಲಿತಾಂಶ ಬರಬೇಕಿದ್ದು, ವರದಿ ಬಂದ ಬಳಿಕ ಪಾನಿಪುರಿ ಹಾಗೂ ಮಸಾಲಪುರಿ ಪದಾರ್ಥಗಳಿಗೆ ಬಳಸುವ ಕೃತಕ ಬಣ್ಣ ನಿಷೇಧದ ಬಗ್ಗೆ ಇಲಾಖೆ ನಿರ್ಧಾರ ಕೈಗೊಳ್ಳಲಿದೆ.
‘ಪಾನಿಪುರಿ ಹಾಗೂ ಮಸಾಲಪುರಿ ಬಗ್ಗೆ ಸಾಕಷ್ಟು ದೂರು ಬಂದಿದ್ದರಿಂದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಲಾಗಿದೆ. 4-5 ರಾಸಾಯನಿಕಗಳನ್ನು ಬಳಸಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ. ಆರೋಗ್ಯ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಪಾನಿಪುರಿ ಹಾಗೂ ಮಸಾಲಪುರಿಗೆ ಬಳಸುವ ರಾಸಾಯನಿಕಗಳನ್ನು ನಿಷೇಧಿಸುವ ಸಾಧ್ಯತೆಯಿದೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಮಂಚೂರಿ, ಕಬಾಬ್ನಲ್ಲಿ ಬಳಕೆ ಮಾಡುವ ಕೃತಕ ಬಣ್ಣ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.