ADVERTISEMENT

ಜಮ್ಮು–ಕಾಶ್ಮೀರದಲ್ಲಿ ನೆಮ್ಮದಿ ನೆಲೆಸಿದೆ: ಎಚ್.ಡಿ. ದೇವೇಗೌಡ

ಮೋದಿ–ಶಾ ಉತ್ತಮ ಕೆಲಸ ಮಾಡುತ್ತಿದ್ದಾರೆ: ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 13:32 IST
Last Updated 31 ಆಗಸ್ಟ್ 2024, 13:32 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಹೊಳೆನರಸೀಪುರ (ಹಾಸನ ಜಿಲ್ಲೆ): ‘ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕ, ಉಗ್ರಗಾಮಿಗಳ ಅಟ್ಟಹಾಸ ಕಡಿಮೆಯಾಗಿದ್ದು, ಜನಸಾಮಾನ್ಯರು ನೆಮ್ಮದಿಯಿಂದ ಓಡಾಡುತ್ತಿದ್ದಾರೆ. ಈಗ ಅಲ್ಲಿ ಚುನಾವಣೆ ನಡೆಯುತ್ತಿದ್ದು, ಜನರು ಯಾರಿಗೆ ಮತ ಹಾಕುತ್ತಾರೆಯೋ ಬಿಡುತ್ತಾರೆಯೋ ಕೇಳಬಾರದು. ಪ್ರಧಾನಿ ಮೋದಿ ಒಳ್ಳೆಯ ಕೆಲಸ ಮಾಡಿದ್ದು, ಜನ ನೆಮ್ಮದಿಯಿಂದಂತೂ ಮತ ಚಲಾಯಿಸುತ್ತಾರೆ’ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಪ್ರತಿಪಾದಿಸಿದರು.

ಇಲ್ಲಿನ ಮಾವಿನಕೆರೆ ಬೆಟ್ಟದಲ್ಲಿ ರಂಗನಾಥಸ್ವಾಮಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಈಗ ಜಮ್ಮು ಕಾಶ್ಮೀರಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಮೋದಿ ಮತ್ತು ಅಮಿತ್‌ ಶಾ ಕಠಿಣ ನಿಲುವಿನೊಂದಿಗೆ ಅಕ್ರಮವನ್ನು ನಿಯಂತ್ರಿಸಿದ್ದಾರೆ’ ಎಂದರು.

‘ಕಾಶ್ಮೀರದಲ್ಲಿರುವ ಶಿವನ ದೇವಾಲಯಕ್ಕೆ 230 ಮೆಟ್ಟಿಲು ಇವೆ. ನಾನು 30 ಮೆಟ್ಟಿಲುಗಳನ್ನು ಹತ್ತಿದೆ. ನಂತರ ಸಿಆರ್‌ಪಿಎಫ್ ಯೋಧರು ದೇವಾಲಯಕ್ಕೆ ಕರೆದುಕೊಂಡು ಹೋದರು. ನಾಥ ದ್ವಾರದಲ್ಲಿ ಕೃಷ್ಣನ ದೇವಾಲಯವಿದ್ದು, ಅಲ್ಲಿಗೂ ಹೋಗಿದ್ದೆ. ವಿಶೇಷ ಪೂಜೆ ಸಲ್ಲಿಸಿದೆ’ ಎಂದರು.

ADVERTISEMENT

‘ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ. ಹಾಸನಕ್ಕೆ ಬರುತ್ತೇನೆ. ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ’ ಎಂದು ಹೇಳಿದರು.

‘ಮಂಡಿ ನೋವು ಬಿಟ್ಟರೆ ನನಗೆ ಬೇರೆ ಆರೋಗ್ಯ ಸಮಸ್ಯೆ ಇಲ್ಲ. ರಂಗನಾಥ ಆಶೀರ್ವಾದದಿಂದ ಇನ್ನೂ ನಾಲ್ಕಾರು ವರ್ಷ ರಾಜಕೀಯ ಮಾಡುತ್ತೇನೆ. ಕಾಂಗ್ರೆಸ್‌ನಿಂದ ರಾಜಭವನ ಚಲೋ ವಿಚಾರವಾಗಿ ಈಗ ನಾನು ಮಾತನಾಡುವುದಿಲ್ಲ. ಮುಂದೆ ಮಾತನಾಡುವ ಕಾಲ ಬರುತ್ತದೆ. ನಿಮ್ಮ ಮುಂದೆ ಬರುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.