ಹಾಸನ: ಲೈಂಗಿಕ ವಿಕೃತಿಗೆ ಸಾಕ್ಷಿಯಾಗಿರುವ ಹೊಳೆನರಸೀಪುರದ ತೆಂಗಿನ ತೋಟಗಳ ನಡುವಿನ ಮನೆಗಳು, ಹಾಸನದಲ್ಲಿ ಸಂಸದರು ಬಳಕೆ ಮಾಡುತ್ತಿದ್ದ ವಸತಿಗೃಹದ ಗೋಡೆಗಳು ಈಗ ಸಂತ್ರಸ್ತೆಯರನ್ನು ನೆನೆದು ಬಿಕ್ಕುತ್ತಿವೆ...
ಕಾಮದ ಅಮಲಿಗೆ ತಮ್ಮ ಊರ ಸುತ್ತಲಿನ ತೋಟದ ಮನೆಗಳು, ಮಾಜಿ ಪ್ರಧಾನಿಗೆ ಗೌರವಾರ್ಥ ನೀಡಿದ್ದ ಹಾಸನದ ಸಂಸದರ ವಸತಿ ಗೃಹ ಬಳಕೆಯಾಗುತ್ತಿತ್ತು ಎಂಬ ಸಂಗತಿಯನ್ನು ತಿಳಿದು ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಮೊದಲೇ ತಿಳಿದಿದ್ದರೆ ಬಲಿಪಶುಗಳಾಗುತ್ತಿರುವ ಅನೇಕ ಹೆಣ್ಣು ಜೀವಗಳ ರಕ್ಷಣೆ ಮಾಡಬಹುದಿತ್ತು
ಎಂಬ ಅಪರಾಧಿ ಭಾವ ಪಕ್ಷದ ಕಾರ್ಯಕರ್ತರು, ಪ್ರಜ್ಞಾವಂತರನ್ನು ಕಾಡುತ್ತಿದೆ.
‘ನಾವೆಲ್ಲ ಎತ್ತಿ ಆಡಿಸಿದ ಮಗು ಅವನು, ಅಧಿಕಾರದ ಮದ ಆತನನ್ನು ವಿಕೃತ ಕಾಮಿಯಾಗಿ ರೂಪಿಸಬಹುದೆಂದು ಅರೆಕ್ಷಣವೂ ಯೋಚಿಸಿರಲಿಲ್ಲ. ಗೋಮುಖ ವ್ಯಾಘ್ರ ಎನ್ನದೆ ಇನ್ನೇನು ಹೇಳಲಿ. ಆತ ಇಷ್ಟೊಂದು ವಿಕೃತನಾಗಿದ್ದ ಎಂಬುದನ್ನು ಯಾವೊಬ್ಬ ಹೆಣ್ಣು ಮಗಳು ಹೇಳಿಕೊಂಡಿದ್ದರೂ, ನಾನು ಈ ಮೊದಲೇ ಅವನ ತಾಯಿಯನ್ನು ಎಚ್ಚರಿಸುತ್ತಿದ್ದೆ’ ಎನ್ನುವಾಗ ಹೊಳೆನರಸೀಪುರದ ಜೆಡಿಎಸ್ ಕಾರ್ಯಕರ್ತೆಯ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಮತ್ತೆ ಅವರ ಬಾಯಿಂದ ಮಾತೇ ಹೊರಡಲಿಲ್ಲ.
‘ಮನೆಗೆಲಸವರು, ಅಡುಗೆಯವರು, ರಸ್ತೆ ಬದಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರುವವರು ಆಗ ಬಲಿಪಶುಗಳಾಗಿದ್ದರು. ಈಗ ಪಾತ್ರ ಬದಲಾಗಿದೆ ಅಷ್ಟೆ. ಶ್ರೀಮಂತ ಮನೆತನದ ಮಹಿಳೆಯರು, ಕೆಲವು ಮಹಿಳಾ ಅಧಿಕಾರಿಗಳು, ಜನಪ್ರತಿನಿಧಿಗಳು ಬಲಿಯಾಗಿದ್ದಾರೆ. ಆಗ ದುಡಿದು ತಿನ್ನುವವರಿಗೆ ಅಷ್ಟಿಷ್ಟು ಕಾಸು ಅವರ ಧ್ವನಿ ಅಡಗಿಸುತ್ತಿತ್ತು. ಈಗ ಆಸ್ತಿ, ಮನೆ, ಹಣ ಅವರನ್ನು ತೆಪ್ಪಗಾಗಿಸಿದೆ.
ಕೆಲವು ಕಾರ್ಯಕರ್ತರು ಸನಿಹಕ್ಕೆ ಬಂದು ಅನಾಮಿಕರಾಗಿ ತಮ್ಮ ಒಡಲಾಳದ ನೋವು ಹಂಚಿಕೊಂಡರು.
‘ಮೈಸೂರು, ಮಂಡ್ಯ, ಬೆಂಗಳೂರು ಎಲ್ಲೇ ಹೋಗಲಿ ಜೆಡಿಎಸ್ ಕಾರ್ಯಕರ್ತೆ ಯರು ಎಂದು ಅಹಂನಿಂದ ಹೇಳಿಕೊಳ್ಳುತ್ತಿದ್ದ ನಮಗೆ, ಈಗ ‘ಹಾಸನದವರು’ ಎನ್ನುವುದೇ ತೀರಾ ಮುಜುಗರ ಮೂಡಿಸುತ್ತಿದೆ. ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಹೋಗಿರುವ ಪಾಪ ಪ್ರಜ್ಞೆ ಕಾಡುತ್ತಿದೆ’ ಎಂದು ಹಾಸನದ ಕಾರ್ಯಕರ್ತೆ ಯೊಬ್ಬರು ಹೇಳಿಕೊಂಡರು. ಅಧಿಕಾರಸ್ಥರ ದಾಹಕ್ಕೆ ಬಲಿಯಾಗಿರುವ ಹೆಣ್ಣು ಜೀವಗಳಿಗೆ ಸಾಂತ್ವನ ಬೇಕಾಗಿದೆ. ಇವ್ಯಾವುದರ ಅರಿವು ಇಲ್ಲದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯರಾಗಿ ದುಡಿದವರಿಗೆ ಬೇಸರವಾಗಿದೆ. ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿ, ಸಾಂತ್ವನ ಹೇಳುವ ಕೆಲಸ ಪಕ್ಷದ ಹಿರಿಯರಿಂದಾದರೂ ಆಗಬೇಕಾಗಿದೆ ಎಂದು ಹಿರಿಯ ಕಾರ್ಯಕರ್ತೆಯೊಬ್ಬರು ಅಲವತ್ತುಕೊಂಡರು.
ಅಂದು– ಇಂದೂ ಹೆಣ್ಣಿನ ಅಸಹಾಯಕತೆ ದುರ್ಬಳಕೆಯಾಗಿದೆ’ ಎಂದು ಅವರು ನಿಟ್ಟುಸಿರು ಬಿಟ್ಟರು.
‘ಆತನ ವಕ್ರದೃಷ್ಟಿಗೆ ಬಲಿಯಾಗಿದ್ದಾರೆ ಎನ್ನಲಾದವರಲ್ಲಿ ಹೆಚ್ಚಿನವರೆಲ್ಲ ವಿವಾಹಿತರು. ತಾತ್ಕಾಲಿಕ ಉದ್ಯೋಗದ ಆಮಿಷ, ಕುಟುಂಬದ ರಕ್ಷಣೆ, ಸಹೋದರರಿಗೆ ಗುತ್ತಿಗೆ ಅಥವಾ ಇನ್ನಾವುದೇ ಕೆಲಸ, ಪತಿಯ ಅಧಿಕಾರದ ಆಸೆ ಇಂತಹ ಸಂಕೋಲೆಗೆ ಮಹಿಳೆ ಬಲಿಯಾಗಿದ್ದಾಳೆ. ಆಕೆಯನ್ನು ಬೆದರಿಸಿ, ಒಂಟಿಯಾಗಿರುವ ತೋಟದ ಮನೆಗಳು, ಸಂಸದರ ವಸತಿ ಗೃಹಗಳು ಅಥವಾ ಮಹಾನಗರಕ್ಕೆ ಕರೆದೊಯ್ದು ದುರ್ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಸ್ಥಳೀಯವಾಗಿ ಯಾರಿಗೂ ಗೊತ್ತಾಗದಂತೆ ಗೋಪ್ಯತೆ ಕಾಪಾಡಲಾಗುತ್ತಿತ್ತು. ಸಂಸದರ ತೀರಾ ಆಪ್ತ ವಲಯದಿಂದ ಈ ವಿಷಯ ಯಾವುದೇ ಕಾರಣಕ್ಕೂ ಹೊರಹೋಗದಂತೆ ಎಚ್ಚರ ವಹಿಸಲಾಗುತ್ತಿತ್ತು’ ಎಂದರು ಇನ್ನೊಬ್ಬ ವಕೀಲರು.‘ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲ ನಿರ್ಬಂಧಗಳ ನಡುವೆಯೂ ಇಂತಹ ದುಷ್ಕೃತ್ಯಗಳು ನಡೆದಿವೆ ಎಂಬ ಸಣ್ಣ ಸುಳಿವೂ ಸ್ಥಳೀಯರಿಗೆ ಇರಲಿಲ್ಲ. ಈಗ ಪೆನ್ಡ್ರೈವ್ ಹಂಚಿಕೆಯ ಬೆನ್ನಲ್ಲಿ ಹೊರ ಬೀಳುತ್ತಿರುವ ಸತ್ಯಗಳು ದಿಗಲುಗೊಳಿಸುತ್ತಿವೆ. ನಾಲ್ಕು ಗೋಡೆಗಳ ನಡುವೆ ಅಸಹಾಯಕಳಾಗುವ ಹೆಣ್ಣನ್ನು ವಿವಸ್ತ್ರಗೊಳಿಸುವಂತೆ ಬೆದರಿಸಿ, ಆಕೆಯ ಚಿತ್ರ, ವಿಡಿಯೊಗಳನ್ನು ಮೊಬೈಲ್ ಫೋನ್ನಲ್ಲಿ ಸೆರೆ ಹಿಡಿದಿಟ್ಟುಕೊಳ್ಳುತ್ತಿದ್ದ ಆತ, ವಾಹನದಲ್ಲಿ ಪ್ರಯಾಣಿಸುವಾಗಲೂ ಅವನ್ನೆಲ್ಲ ವೀಕ್ಷಿಸುತ್ತಿದ್ದ. ಈ ಚಿತ್ರಗಳನ್ನೇ ಇಟ್ಟು ಬ್ಲ್ಯಾಕ್ ಮೇಲ್ ಅಸ್ತ್ರವಾಗಿ ಬಳಸುತ್ತಿದ್ದ, ಅದೇ ಕಾರಣಕ್ಕೆ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ ಎಂದು ಆತನ ಆಪ್ತರು ಬಾಯ್ಬಿಟ್ಟಾಗ, ಪಾಪದ ಕೊಡ ತುಂಬಿದೆ ಎಂದು ನಾವು ಸ್ನೇಹಿತರೆಲ್ಲ ಮಾತನಾಡಿಕೊಂಡಿದ್ದೆವು’ ಎಂದ ಇನ್ನೊಬ್ಬ ವಕೀಲರು ತಮ್ಮ ಹೆಸರು ಪ್ರಕಟಿಸದಂತೆ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.