ADVERTISEMENT

ಪೆಪ್ಪರ್‌ ಸ್ಪ್ರೇ ಅಪಾಯಕಾರಿ ಅಸ್ತ್ರ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 7 ಮೇ 2024, 14:49 IST
Last Updated 7 ಮೇ 2024, 14:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಅಪಾಯ ಎದುರಾದಾಗ ವೈಯಕ್ತಿಕ ರಕ್ಷಣೆಗಾಗಿ ಬಳಸುವ ಪೆಪ್ಪರ್‌ ಸ್ಪ್ರೇ ಅಪಾಯಕಾರಿ ಅಸ್ತ್ರ ಎಂಬುದಕ್ಕೆ ಈ ದೇಶದಲ್ಲಿ ಯಾವುದೇ ಕಾನೂನನ್ನು ರೂಪಿಸಲಾಗಿಲ್ಲ’ ಎಂಬ ಅಂಶವನ್ನು ಪ್ರಕರಣವೊಂದರಲ್ಲಿ ಗಂಭೀರವಾಗಿ ಉಲ್ಲೇಖಿಸಿರುವ ಹೈಕೋರ್ಟ್‌, ‘ಅಮೆರಿಕದಂತಹ ದೇಶದಲ್ಲಿ ಪೆಪ್ಪರ್‌ ಸ್ಪ್ರೇ ಬಳಕೆಯನ್ನು ಹಾನಿಕಾರಕ ರಾಸಾಯನಿಕ ಸಿಂಪಡಣೆ ಎಂದೇ ಪರಿಗಣಿಸಲಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ರದ್ದುಗೊಳಿಸಬೇಕು’ ಎಂದು ಕೋರಿದ್ದ ಸಿ.ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಕಂಪನಿ (ಸಿಕೆಸಿ ಅಂಡ್ ಸನ್ಸ್ ಕಂಪನಿ) ಚಿನ್ನಾಭರಣಗಳ ಮಳಿಗೆಯ ನಿರ್ದೇಶಕ ಸಿ.ಗಣೇಶ್ ನಾರಾಯಣ ಮತ್ತು ಅವರ ಪತ್ನಿ ವಿದ್ಯಾ ನಟರಾಜ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಂಶದ ಮೇಲೆ ಗಮನ ಸೆಳೆದಿದೆ.

‘ವೈಯಕ್ತಿಕ ರಕ್ಷಣೆಗಾಗಿ ಪೆಪ್ಪರ್‌ ಸ್ಪ್ರೇ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ, ಇಂತಹ ಹೇಳಿಕೆಯು ಸಾಕ್ಷ್ಯ ಅಧಿನಿಯಮದ ಅನುಸಾರ ತನಿಖೆಗೆ ಒಳಪಟ್ಟು ಸತ್ಯ ಹೊರಬರಬೇಕಿದೆ. ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಗಾಯವನ್ನು ಉಂಟು ಮಾಡುವುದನ್ನು ಭಾರತೀಯ ದಂಡ ಸಂಹಿತೆ–1860ರ ಕಲಂ 324 ವಿವರಿಸುತ್ತದೆ. ಅಂತೆಯೇ, ಇದೇ ಕಲಂನ ವ್ಯಾಪ್ತಿಯಲ್ಲಿ ಪೆಪ್ಪರ್‌ ಸ್ಪ್ರೇ ಬಳಕೆಯನ್ನೂ ಪರಿಗಣಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.