ಬೆಂಗಳೂರು: ಬಾಕಿ ಉಳಿದಿರುವ ನಿಗಮ–ಮಂಡಳಿಗಳ ಅಧ್ಯಕ್ಷರ ನೇಮಕಾತಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಶಾಸಕರು, ಮುಖಂಡರಿಗೆ ಅವಕಾಶ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಶಾಸಕರ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿತು.
ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರು, ನಿಗಮ–ಮಂಡಳಿ ಅಧ್ಯಕ್ಷ ಸ್ಥಾನದ ಜೊತೆಗೆ, ಸದಸ್ಯರು, ನಿರ್ದೇಶಕರ ನೇಮಕದಲ್ಲೂ ಹೆಚ್ಚಿನ ಅವಕಾಶ ನೀಡಬೇಕು. ಈಗಾಗಲೇ ನೇಮಕವಾಗಿರುವ ಕೆಲ ನಿಗಮಗಳು ತೃಪ್ತಿಕರವಾಗಿಲ್ಲ. ಅಲ್ಲಿ ಬದಲಾವಣೆ ಮಾಡಬೇಕು ಎಂದರು.
ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಪ್ರಮುಖವಾಗಿ ಚರ್ಚಿಸಿದ ನಿಯೋಗ, ಗ್ರಾಮೀಣ ಪ್ರದೇಶ ಮುಸ್ಲಿಂ ಬಾಲಕಿಯರು ಎಸ್ಎಸ್ಎಲ್ಸಿಗೇ ಶಾಲೆ ತೊರೆಯುತ್ತಿದ್ದಾರೆ. ಪ್ರೌಢಶಾಲೆಗಳಲ್ಲೇ ಪಿಯು ಕಾಲೇಜುಗಳನ್ನು ಆರಂಭಿಸಬೇಕು. ಕಾಲೇಜು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಲೋಕಸಭಾ ಚುನಾವಣೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯ ಕಾಂಗ್ರೆಸ್ ಪಕ್ಷದ ಜೊತೆ ನಿಂತಿದೆ. ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು.
‘ಬಜೆಟ್ ನಂತರ ನೀತಿ ಸಂಹಿತೆಯ ಕಾರಣ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಎಲ್ಲರೂ ಭೇಟಿ ಮಾಡಿ ಸಮುದಾಯದ ಅಭಿವೃದ್ಧಿ, ಅನುದಾನ ಹಂಚಿಕೆ, ಬಳಕೆ, ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಕುರಿತು ಚರ್ಚಿಸಿದೆವು’ ಎಂದು ನಿಯೋಗದ ಸದಸ್ಯರೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.