ADVERTISEMENT

ಪಿಎಂ ಜನೌಷಧ ಕೇಂದ್ರ | ಖಾಸಗಿ ಲಾಬಿಗೆ ಮಣಿದ ವೈದ್ಯಕೀಯ ಸಚಿವ: ವಿಜಯೇಂದ್ರ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 2:21 IST
Last Updated 14 ಆಗಸ್ಟ್ 2024, 2:21 IST
<div class="paragraphs"><p>ಬಿ.ವೈ ವಿಜಯೇಂದ್ರ ( ಸಂಗ್ರಹ ಚಿತ್ರ)</p></div>

ಬಿ.ವೈ ವಿಜಯೇಂದ್ರ ( ಸಂಗ್ರಹ ಚಿತ್ರ)

   

ಬೆಂಗಳೂರು: ‘ಖಾಸಗಿ ಲಾಬಿಗಳ ಒತ್ತಡಕ್ಕೆ ಮಣಿದಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಹೊಸ ಜನೌಷಧ ಕೇಂದ್ರಗಳಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದು ಬಡವರ ವಿರೋಧಿ ಧೋರಣೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ.

ಈ ಕುರಿತು ‘ಎಕ್ಸ್‌’ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ವಿಜಯೇಂದ್ರ, ಸರ್ಕಾರದ ನಡೆ ಮಾನವೀಯ ಮೌಲ್ಯವಿಲ್ಲದ ಜನವಿರೋಧಿಯಲ್ಲದೇ ಬೇರೇನೂ ಅಲ್ಲ ಎಂದು ಹೇಳಿದ್ದಾರೆ.

ADVERTISEMENT

‘ದುಬಾರಿ ಔಷಧಗಳು ಬಡ ಜನರ ಆರೋಗ್ಯದ ಹಕ್ಕು ಕಸಿಯಬಾರದು. ಜನಸಾಮಾನ್ಯರಿಗೂ ಗುಣಮಟ್ಟದ ಔಷಧಗಳು ಕಡಿಮೆ ದರದಲ್ಲಿ ದೊರಕಬೇಕು ಎಂಬ ಮಹತ್ವದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಜನೌಷಧ ಕೇಂದ್ರ ಸ್ಥಾಪಿಸಿದರು. ಸದ್ಯ ರಾಜ್ಯದಲ್ಲಿ 8,900ಕ್ಕೂ ಹೆಚ್ಚು ಜನೌಷಧ ಕೇಂದ್ರಗಳಿಂದ ಪ್ರತಿ ದಿನ 20 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿವೆ’ ಎಂದಿದ್ದಾರೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧ ಕೇಂದ್ರಗಳಿಗೆ ಅನುಮತಿ ನೀಡುವುದಿಲ್ಲ ಎಂಬ ಸಚಿವರ ಹೇಳಿಕೆಯನ್ನು ನೋಡಿದರೆ ಬಡವರ ಆರೋಗ್ಯದ ವಿಷಯದಲ್ಲೂ ರಾಜಕಾರಣ ಮಾಡಲು ಮುಂದಾಗಿರುವುದು ಸ್ಪಷ್ಟವಾಗುತ್ತದೆ. ಅನ್ನ, ಅಕ್ಷರ, ಆರೋಗ್ಯ ವಿಷಯದಲ್ಲೂ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯುವ ಕಾಂಗ್ರೆಸ್‌ ಸರ್ಕಾರದ ನಡೆ ಜನವಿರೋಧಿ. ಖಾಸಗಿಯವರ ಪ್ರಭಾವಕ್ಕೆ ಮಣಿದು ಬಡವರಿಗೆ ದ್ರೋಹ ಬಗೆಯಲು ಹೊರಟರೆ ಕೈಕಟ್ಟಿ ಕೂರುವುದಿಲ್ಲ. ಸಚಿವರು ಕೂಡಲೇ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಡಾ.ಶರಣಪ್ರಕಾಶ

‘ಸರ್ಕಾರಿ ಆಸ್ಪತ್ರೆ ಬಳಿ ಜನೌಷಧ ಕೇಂದ್ರಕ್ಕೆ ಅವಕಾಶವಿಲ್ಲ’

ಕಲಬುರಗಿ: ‘ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಬಳಿ ಜನೌಷಧ ಮಳಿಗೆಗಳನ್ನು ತೆರೆಯುವುದರಿಂದ ವೈದ್ಯರು ಹೊರಗಡೆ ಲಭ್ಯವಿರುವ ಔಷಧ ಬರೆದುಕೊಡುವ ಸಾಧ್ಯತೆಗಳಿವೆ. ಹೀಗಾಗಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಮಳಿಗೆ ಆರಂಭಕ್ಕೆ ಅವಕಾಶ ನೀಡುವುದಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವೈದ್ಯರು ಯಾವುದೇ ಕಾರಣಕ್ಕೂ ಹೊರಗಡೆ ಔಷಧ ಖರೀದಿಸುವಂತೆ ರೋಗಿಗಳಿಗೆ ಸೂಚಿಸಬಾರದು. ನಿರ್ದಿಷ್ಟ ಔಷಧಗಳು ಇಲ್ಲದಿದ್ದರೆ ಆ ಬಗ್ಗೆ ತಿಳಿಸಿದರೆ ಸರ್ಕಾರ ಒದಗಿಸಿಕೊಡುತ್ತದೆ. ಹೊರಗಡೆಯ ಔಷಧ ಬರೆದುಕೊಡುವ ರೂಢಿ ಒಳ್ಳೆಯದಲ್ಲ. ಇದರಿಂದಾಗಿಯೇ ಜನೌಷಧ ಕೇಂದ್ರಗಳಿಗೆ ಅವಕಾಶ ನೀಡಬಾರದು ಎಂದು ತೀರ್ಮಾನಿಸಿದ್ದೇವೆ. ಜನೌಷಧ ಕೇಂದ್ರಗಳು ಮಾರುಕಟ್ಟೆ ಪ್ರದೇಶದಲ್ಲಿ ಇರಬೇಕು’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.