ADVERTISEMENT

ನಮ್ಮ ಕುಟುಂಬ ದುರ್ದಿನಗಳನ್ನು ಎಣಿಸುತ್ತಿದೆ: ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 17:06 IST
Last Updated 2 ಜುಲೈ 2024, 17:06 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ    

ಬೆಂಗಳೂರು: ‘ನಾನೊಬ್ಬ ಹಿರಿಯ ನಾಗರಿಕನಿದ್ದು, ನನ್ನ ಮನಸ್ಸು ಹಾತೊರೆದಾಗಲೆಲ್ಲಾ ನಾನು ಆತ್ಮಸಂತೋಷಕ್ಕಾಗಿ ದೇಗುಲಗಳಿಗೆ ಭೇಟಿ ನೀಡುತ್ತೇನೆ. ಆದರೆ, ನಮ್ಮ ಇಡೀ ಕುಟುಂಬ ಇಂದು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ದುರ್ದಿನಗಳನ್ನು ಎಣಿಸುತ್ತಿದೆ. ನಾನು ಜಾಮೀನಿನ ಮೇಲಿರುವ ಕಾರಣ ನನಗೆ ತಿರುಪತಿ ಮತ್ತು ತಿರುಚ್ಚಿ ದೇವಾಲಯಗಳಿಗೆ ಭೇಟಿ ನೀಡುವ ದಿಸೆಯಲ್ಲಿ ರಾಜ್ಯದಿಂದ ಹೊರಗೆ ಪ್ರಯಾಣಿಸಲು ಅನುಮತಿ ನೀಡಬೇಕು’ ಎಂದು ಕೋರಿ ಮಾಜಿ ಸಚಿವ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಎಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಮಂಗಳವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ರೇವಣ್ಣ ಪರ ವಕೀಲ ಜಿ.ಅರುಣ್‌, ‘ಅರ್ಜಿದಾರರ ಪುತ್ರ ಪ್ರಜ್ವಲ್‌ ರೇವಣ್ಣ 2019ರಿಂದ 2024ರವರೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಈ ವೇಳೆ ಅವರಿಗೆ ದೆಹಲಿಯಲ್ಲಿ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಎಚ್‌.ಡಿ.ರೇವಣ್ಣ ಕೂಡಾ ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೇಕಿದ್ದು ಅವರಿಗೆ ನೀಡಲಾಗಿರುವ ಜಾಮೀನಿನ ಷರತ್ತುಗಳನ್ನು ಸಡಿಲಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್, ‘ಅರ್ಜಿದಾರರು ತಾವು ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ ಎಂಬುದರ ಪ್ರವಾಸದ ಪಟ್ಟಿಯನ್ನೇ ನೀಡಿಲ್ಲ. ಅಂತೆಯೇ, ಸಂಸದರ ನಿವಾಸ ತೆರವುಗೊಳಿಸಬೇಕಾದವರು ಅವರ ಪುತ್ರ. ಇವರು ಹೇಗೆ ನಿವಾಸ ಖಾಲಿ ಮಾಡಲು ಅನುಮತಿ ಕೇಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.