ಬೆಂಗಳೂರು: ನಾಗರಿಕ ವಿಮಾನಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲೇ ವಿಮಾನ ತಯಾರಿಕೆ, ದುರಸ್ತಿ ಪ್ರಕ್ರಿಯೆಗಳು ನಡೆಯುವಂತೆ ಸೌಲಭ್ಯಗಳನ್ನು ಕಲ್ಪಿಸಬೇಕಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವೈಮಾಂತರಿಕ್ಷ ಹಾಗೂ ರಕ್ಷಣಾ ಔದ್ಯಮಿಕ ಕ್ಷೇತ್ರದ ಬೆಳವಣಿಗೆಗಳಿಗೆ ಕೈಗೊಳ್ಳಬೇಕಾಗಿರುವ ಉಪಕ್ರಮಗಳ ಕುರಿತು ಸಲಹೆ ನೀಡಲು ಸರ್ಕಾರ ರಚಿರುವ ವಿಷನ್ ಗ್ರೂಪ್ನ ಮೊದಲ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಏರ್ ಬಸ್ ಇಂಡಿಯಾದ ನಿರ್ದೇಶಕ ಕೃತ್ತಿವಾಸನ್ ಮುಖರ್ಜಿ, ಆರ್.ಟಿ.ಎಕ್ಸ್ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ಮುಖ್ಯಸ್ಥ ಸಮಿತ್ ರಾಯ್, ಡೈನಮಿಕ್ ಟೆಕ್ನಾಲಜೀಸ್ ಲಿಮಿಟೆಡ್ ಸಿಇಒ ಉದ್ಯಂತ್ ಮಲ್ಹೋತ್ರ, ಬೋಯಿಂಗ್ ಇಂಡಿಯಾ ಹಿರಿಯ ನಿರ್ದೇಶಕ ಅಶ್ವನಿ ಭಾರ್ಗವ ಪಾಲ್ಗೊಂಡಿದ್ದರು. ಎಚ್ಎಎಲ್ ನಿರ್ದೇಶಕ ಜಯದೇವ್ ಮತ್ತು ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮುಖ್ಯಸ್ಥ ಅಪ್ಪಾರಾವ್ ವೆಂಕಟ ವಲ್ಲಾವರಪು ಅವರು ಆನ್ಲೈನ್ ಮೂಲಕ ಭಾಗವಹಿಸಿದ್ದರು.
ವಿಮಾನದ ತಯಾರಿಕೆಗೆ ದುಬಾರಿ ವೆಚ್ಚವಾಗುತ್ತಿದೆ. ಈ ಕಾರಣಕ್ಕಾಗಿ ಶೇ 70ರಷ್ಟು ಉತ್ಪಾದನೆ ವಿದೇಶದಲ್ಲೇ ಆಗುತ್ತಿವೆ. ಕರ್ನಾಟಕದಲ್ಲಿ ವಿಪುಲ ಅವಕಾಶವಿದ್ದು, ಅದನ್ನು ಬಳಸಿಕೊಳ್ಳಬೇಕಿದೆ ಎಂದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೆಐಎಡಿಬಿ ವತಿಯಿಂದ ನಿರ್ಮಿಸಿರುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ. ಇಲ್ಲಿ ಪೊಲೀಸ್ ಔಟ್-ಪೋಸ್ಟ್ ಆರಂಭಿಸುವ ಜೊತೆಗೆ ಈ ಪ್ರದೇಶದಲ್ಲಿ ಒಳ್ಳೆಯ ಶಾಲೆಗಳು, ಹೋಟೆಲ್ಗಳು ಮತ್ತು ವಸತಿ ಸೌಲಭ್ಯಗಳು ಹೆಚ್ಚಾಗಿ ಬರುವಂತೆ ಗಮನ ಹರಿಸಬೇಕಾಗಿದೆ. ಬಂಡವಾಳ ಆಕರ್ಷಣೆಗೆ ಇದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.