ADVERTISEMENT

ಹಾಸನಕ್ಕೆ ಕಾಲಿಟ್ಟರೆ ಶಾ, ನಡ್ಡಾಗೆ ಕಲ್ಲೇಟು: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:59 IST
Last Updated 16 ಮೇ 2024, 15:59 IST
 ಪ್ರಿಯಾಂಕ್ ಖರ್ಗೆ
 ಪ್ರಿಯಾಂಕ್ ಖರ್ಗೆ   

ಬೆಂಗಳೂರು: ಕೇಂದ್ರ ಸಚಿವರಾದ ಅಮಿತ್‌ ಶಾ, ಪ್ರಲ್ಹಾದ್‌ ಜೋಶಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಸನಕ್ಕೆ ಕಾಲಿಟ್ಟರೆ ಜನರು ಅವರ ಮೇಲೆ ಕಲ್ಲು ಎಸೆಯುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಬಿಜೆಪಿ ನಾಯಕರು ಇದುವರೆಗೂ ಹಾಸನದ ಸಂತ್ರಸ್ತೆಯರ ಮನೆಗಳಿಗೆ ಭೇಟಿ ನೀಡಿಲ್ಲ. ಒಂದು ವೇಳೆ ಭೇಟಿ ನೀಡಿದ್ದೇ ಆದಲ್ಲಿ, ಪ್ರಜ್ವಲ್‌ ಪ್ರಕರಣದ ನಂತರವೂ ಜೆಡಿಎಸ್‌ ಜತೆ ಮೈತ್ರಿ ಮುಂದುವರಿಸಿದ್ದಕ್ಕಾಗಿ ಜನರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದರು.

ಬಿಜೆಪಿ ನಾಯಕರು ಲೈಂಗಿಕ ಕಿರುಕುಳದ ಆರೋಪಿ ವಿರುದ್ಧ ಹಾಸನದಲ್ಲಿ ಏಕೆ ಪ್ರತಿಭಟನೆ ನಡೆಸಲಿಲ್ಲ? ಸಂತ್ರಸ್ತರು ಮಹಿಳೆಯರಲ್ಲವೇ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರನ್ನು ಪ್ರಶ್ನಿಸಿದ ಪ್ರಿಯಾಂಕ್, ಆರೋಪಿ ಅನ್ಯ ಧರ್ಮದವನಾಗಿದ್ದರೆ ಬಿಜೆಪಿ ನಾಯಕರು ಪ್ರತಿಭಟನೆಗೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಕಾಂಗ್ರೆಸ್‌ಗೆ ಎಲ್ಲರೂ ಸಮಾನರು, ಇಂತಹ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧವೂ ಧ್ವನಿ ಎತ್ತುತ್ತದೆ ಎಂದು ಹೇಳಿದರು.

ADVERTISEMENT

ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸೀಟು ಪಡೆಯುವುದಾಗಿ ಹೇಳುವ ಮೂಲಕ ಪ್ರತಿ ಪಕ್ಷಗಳ ಸ್ಥಾನಗಳನ್ನು ಖರೀದಿಸುವ ಸೂಚನೆ ನೀಡುತ್ತಿದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಾತುಗಳೂ ಶಾಸಕರ ಖರೀದಿಯ ಪಿತೂರಿ ನಡೆಸಿದ ಸೂಚನೆಯಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.