ADVERTISEMENT

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿಯ ಸಚಿವರು, ಶಾಸಕರು ಭಾಗಿ: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಸೆಪ್ಟೆಂಬರ್ 2022, 12:41 IST
Last Updated 5 ಸೆಪ್ಟೆಂಬರ್ 2022, 12:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಿಜೆಪಿಯ ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿದೆ.

ಈ ವಿಚಾರವಾಗಿ ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಪಿಎಸ್‌ಐ ಹಗರಣದ ಮೂಲ ಇರುವುದು ವಿಧಾನಸೌಧದಲ್ಲೇ ಎಂಬ ನಮ್ಮ ಪ್ರತಿಪಾದನೆಗೆ ಈಗ ಸಾಕ್ಷ್ಯ ಸಿಕ್ಕಿದೆ. ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ ಅವರು ಅಭ್ಯರ್ಥಿಯ ಬಳಿ ₹15 ಲಕ್ಷ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಇಡೀ ಬಿಜೆಪಿಯೇ ಬಾಗಿಯಾಗಿರುವುದು ನಿಶ್ಚಿತ. ಬಸವರಾಜ ಬೊಮ್ಮಾಯಿ ಅವರೇ, ತನಿಖೆ ವಿಸ್ತರಿಸಿ ಶಾಸಕರನ್ನು ಬಂಧಿಸುವುದು ಯಾವಾಗ’ ಎಂದು ಪ್ರಶ್ನಿಸಿದೆ.

‘ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಕೇವಲ ಅಧಿಕಾರಿಗಳ ಮಟ್ಟದಲ್ಲೇ ಮೊಟಕುಗೊಳಿಸಿ ವಿಧಾಸೌಧದಲ್ಲಿನ ಭ್ರಷ್ಟ ಕುಳಗಳು ಬಚಾವಾಗಲು ಯತ್ನಿಸಿವೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎಂದಿದ್ದ ಬೊಮ್ಮಾಯಿ ಅವರೇ, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ತನಿಖೆ ನಡೆಸದಿರುವುದೇಕೆ ನಿಮ್ಮ ಶಾಸಕ ಬಸವರಾಜ್ ದಡೇಸಗೂರರವರನ್ನು ತನಿಖೆ ಮಾಡುವುದು ಯಾವಾಗ’ ಎಂದು ಕಾಂಗ್ರೆಸ್‌ ಕೇಳಿದೆ.

ADVERTISEMENT

‘ಬಿಜೆಪಿಯ ಸಚಿವರು, ಶಾಸಕರು ಪಾಲು ಹಂಚಿಕೊಂಡು ಪಿಎಸ್‌ಐ ಹಗರಣವನ್ನು ನಡೆಸಿದ್ದಾರೆ. ರಾಜಕಾರಣಿಗಳ, ಸಚಿವರ ಹಸ್ತಕ್ಷೇಪವಿಲ್ಲದೆ ಇಷ್ಟು ವ್ಯಾಪಕವಾದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ, ಪಿಎಸ್‌ಐ ಅಕ್ರಮದಲ್ಲಿ ನಿಮ್ಮ ಸಂಪುಟದ ಸಚಿವರ ಹೆಸರು ಬಂದರೂ ಸುಮ್ಮನಿದ್ದೀರಿ, ನಿಮ್ಮ ಶಾಸಕರ ಹೆಸರು ಬಂದರೂ ಸುಮ್ಮನಿದ್ದೀರಿ. ಇದೇನಾ ಪಾರದರ್ಶಕತೆ’ ಎಂದು ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.