ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ಮೈಸೂರು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗೆಂದು ಮೀಸಲಿಟ್ಟ ಜಾಗವನ್ನೂ ಸೇರಿಸಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೀಗ ವಿವಾದಿತ ಜಾಗವನ್ನು ಮುಡಾಕ್ಕೆ ವಾಪಸ್ ನೀಡಿರುವ ಪಾರ್ವತಿ ಅವರು ಆಗಸ್ಟ್ 31ರಂದು ತಿದ್ದುಪಡಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ.
ಈ ಕುರಿತ ದಾಖಲೆಗಳನ್ನು ಆರ್ ಟಿಐ ಕಾರ್ಯಕರ್ತ ಗಂಗರಾಜು ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ಹೆಬ್ಬಾಳ ಗ್ರಾಮದ ಸರ್ವೆ 445ರಲ್ಲಿ 20 ಗುಂಟೆ ಜಾಗವನ್ನು ಪಾರ್ವತಿ ಅವರು ಎ.ಎಸ್. ಗಣೇಶ ಎಂಬುವರಿಂದ 2023ರ ಸೆ. 29 ರಂದು 1.85 ಕೋಟಿಗೆ ಖರೀದಿಸಿದ್ದರು. ಒಟ್ಟು 20 ಸಾವಿರ ಚದರ ಅಡಿಯ ನಿವೇಶನ ಇದಾಗಿದೆ. ಇದರಲ್ಲಿ 8 ಸಾವಿರ ಚ.ಅಡಿ ಜಾಗವನ್ನು ಈಗಾಗಲೇ ಹಿಂದಿನ ಮಾಲೀಕರು ಪ್ರಾಧಿಕಾರಕ್ಕೆ ರಸ್ತೆ ಹಾಗೂ ನೀರಿನ ಪೈಪ್ ಲೇನ್ ಗಾಗಿ ಬಿಟ್ಟುಕೊಟ್ಟಿದ್ದರು. ಆದರೆ ಪಾರ್ವತಿ ಅವರು ಇದನ್ನೂ ಸೇರಿಸಿ ತಮ್ಮ ಹೆಸರಿಗೆ ಕ್ರಯ ಮಾಡಿಸಿಕೊಂಡಿದ್ದರು ಎಂದು ಗಂಗರಾಜು ಆರೋಪಿಸಿದರು.
'ನಾನು ಈ ಬಗ್ಗೆ ಆರ್ ಟಿಐ ಅಡಿ ದಾಖಲೆ ಕೋರಿ ಮಾಹಿತಿ ಸಲ್ಲಿಸಿದ್ದೆ. ಇದರ ಮಾಹಿತಿ ತಿಳಿಯುತ್ತಲೇ ಪಾರ್ವತಿ ಅವರು ಇದೇ ವರ್ಷ ಆಗಸ್ಟ್ 30ರಂದು ಇದೇ ಆಸ್ತಿಗೆ ತಿದ್ದುಪಡಿ ಕ್ರಯ ಮಾಡಿಕೊಂಡಿದ್ದಾರೆ. 31ರಂದು ಮತ್ತೊಂದು ತಿದ್ದುಪಡಿ ಕ್ರಯ ಮಾಡಿಸಿಕೊಂಡು 8900 ಚ.ಡಿ. ಜಾಗವನ್ನು ಮುಡಾಕ್ಕೆ ಬಿಟ್ಟುಕೊಟ್ಟಿದ್ದಾರೆ' ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.