ADVERTISEMENT

ಪಶ್ನೆಗಳ ಅನುವಾದ ಮಾಡಿದ್ದು ಭಾಷಾಂತರಕಾರರು: ಕರ್ನಾಟಕ ಲೋಕ ಸೇವಾ ಆಯೋಗ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 16:33 IST
Last Updated 29 ಆಗಸ್ಟ್ 2024, 16:33 IST
KPSC
KPSC   

ಬೆಂಗಳೂರು: ‘ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದ ಮಾಡಿದ್ದು ಗೂಗಲ್‌ ಅಥವಾ ಎಐ ಅಲ್ಲ. ಭಾಷಾಂತರ ಇಲಾಖೆಯ ಭಾಷಾಂತರಕಾರರು ಮಾಡಿದ್ದು’ ಎಂದು ಕರ್ನಾಟಕ ಲೋಕ ಸೇವಾ ಆಯೋಗ ಹೇಳಿದೆ.

ಭಾಷಾಂತರ ಕಾರ್ಯವು ಆಯೋಗದ ಕಚೇರಿಯಲ್ಲೇ ನಡೆದಿದೆ. ಗೂಗಲ್‌ ಅಥವಾ ಕೃತಕ ಬುದ್ಧಿಮತ್ತೆ ಬಳಸಿಲ್ಲ. ಇಂತಹ ತಂತ್ರಾಂಶಗಳನ್ನು ಪ್ರಶ್ನೆಗಳ ಭಾಷಾಂತರದಲ್ಲಿ ಬಳಸಲು ಕೆಪಿಎಸ್‌ಸಿ ನಿಯಮಗಳಲ್ಲೂ ಅವಕಾಶವಿಲ್ಲ ಎಂದು ಕಾರ್ಯದರ್ಶಿ ರಾಕೇಶ್‌ಕುಮಾರ್ ಹೇಳಿದ್ದಾರೆ. 

ಕನ್ನಡ ಪ್ರಶ್ನೆಗಳಲ್ಲಿ ತೀರ ಗೊಂದಲಗಳು ಇದ್ದರೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ವಿಷಯ ತಜ್ಞರ ಸಮಿತಿಯ ಅಭಿಪ್ರಾಯ ಪಡೆದು ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ADVERTISEMENT

ಆಕ್ಷೇಪಣೆಗೆ ಸೆ.4ರವರೆಗೆ ಅವಕಾಶ: 

ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸೆ.4ರವರೆಗೆ ಅವಕಾಶ ನೀಡಿದೆ. ಆಕ್ಷೇಪಣೆಗಳನ್ನು ಅಂದು ಸಂಜೆ 5.30ರ ಒಳಗೆ ಆಯೋಗಕ್ಕೆ ಸಲ್ಲಿಸಲು ಸೂಚಿಸಿದೆ.

ಪ್ರತಿ ಪ್ರಶ್ನೆಗೆ ₹50 ಶುಲ್ಕ: 

ಆಕ್ಷೇಪಣೆ ಸಲ್ಲಿಸಲು ಪ್ರತಿ ಪ್ರಶ್ನೆಗೆ ₹50 ಶುಲ್ಕ ನಿಗದಿ ಮಾಡಿದ್ದು, ಐಪಿಒ ಅಥವಾ ಡಿಡಿ ಮೂಲಕ ಆಯೋಗದ ಕಾರ್ಯದರ್ಶಿ ಹೆಸರಿಗೆ ಸಂದಾಯ ಮಾಡಬೇಕು. ಜೊತೆಗೆ ಪ್ರಶ್ನೆ ಸಂಖ್ಯೆ, ಪರೀಕ್ಷಾ ನೋಂದಣಿ ಸಂಖ್ಯೆ ನಮೂದಿಸಬೇಕು. ಪ್ರವೇಶ ಪತ್ರ ಲಗತ್ತಿಸಬೇಕು ಎಂದು ಸೂಚಿಸಲಾಗಿದೆ.

ಪ್ರಶ್ನೆಗಳ ಕಡಿತ, ಪರಿಹಾರಾತ್ಮಕ ಅಂಕಕ್ಕೆ ಆಗ್ರಹ:

ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ನೀಡಿದ ಪರೀಕ್ಷಾ ವಿವರದಂತೆ ಪ್ರಶ್ನೆ ಪತ್ರಿಕೆ–2ರ ಬೌದ್ಧಿಕ ಸಾಮರ್ಥ್ಯ ವಿಭಾಗದಲ್ಲಿ 30 ಪ್ರಶ್ನೆಗಳನ್ನು ಕೇಳಬೇಕಿತ್ತು. ಆದರೆ, ಕೇಳಿರುವುದು 18 ಮಾತ್ರ. ಈ ಕುರಿತು ಆಯೋಗ ಸ್ಪಷ್ಟನೆ ನೀಡಿಲ್ಲ. ಕೈಬಿಟ್ಟ ಪ್ರಶ್ನೆಗಳಿಗೆ ಪರಿಹಾರಾತ್ಮಕ ಅಂಕಗಳನ್ನು ನೀಡಬೇಕು ಎಂದು ಹಲವು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.