ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದ 8ನೇ ಆರೋಪಿ, ವೃತ್ತಿಯಲ್ಲಿ ಚಾಲಕನಾಗಿರುವ, ತಾಲ್ಲೂಕಿನ ಕುರುಬರಹಟ್ಟಿ ನಿವಾಸಿ ರವಿ ಗುರುವಾರ ಚಿತ್ರದುರ್ಗ ನಗರದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
ರೇಣುಕಸ್ವಾಮಿಯನ್ನು ಅಪಹರಿಸಿದ್ದ ತಂಡ ಈತ ಚಾಲನೆ ಮಾಡುತ್ತಿದ್ದ ಕಾರು ಬಾಡಿಗೆಗೆ ಪಡೆದು ಬೆಂಗಳೂರಿಗೆ ಕರೆದೊಯ್ದಿತ್ತು.
ಕೊಲೆ ಪ್ರಕರಣದ 4ನೇ ಆರೋಪಿಯಾಗಿರುವ ರಾಘವೇಂದ್ರ ಹಾಗೂ ಇತರರು ಜೂನ್ 8ರಂದು ಟ್ಯಾಕ್ಸಿ ಕಾಯ್ದಿರಿಸಿದ್ದರು. ಇಟಿಯೋಸ್ ಕಾರು ತಂದಿದ್ದ ರವಿ, ರೇಣುಕಸ್ವಾಮಿ ಹಾಗೂ ಇತರರನ್ನು ನಗರದ ಜಗಳೂರು ಮಹಾಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ ಹತ್ತಿಸಿಕೊಂಡಿದ್ದ. ಎಲ್ಲರೂ ಸಂಜೆ ಬೆಂಗಳೂರು ತಲುಪಿದ್ದರು. ಮಧ್ಯ ರಾತ್ರಿವರೆಗೂ ಬಾಡಿಗೆ ಹಣಕ್ಕಾಗಿ ಕಾದಿದ್ದ ರವಿಗೆ, ನಂತರ ಕೊಲೆ ವಿಷಯ ಗೊತ್ತಾಗಿತ್ತಾದರೂ ಅಂದೇ ನಗರಕ್ಕೆ ವಾಪಸಾಗಿ ತಲೆಮರೆಸಿಕೊಂಡಿದ್ದ.
ಶರಣಾಗತಿಗೆ ಮನವೊಲಿಕೆ: ಪ್ರಕರಣ ಜಟಿಲವಾಗುತ್ತಿದ್ದಂತೆ ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಕರೆ ಮಾಡಿದ್ದ ರವಿ, ತನ್ನದೇ ಕಾರಿನಲ್ಲಿ ರೇಣುಕಸ್ವಾಮಿಯನ್ನು ಕರೆದೊಯ್ದ ವಿಚಾರ ತಿಳಿಸಿದ್ದ. ಸಿಕ್ಕಿಬೀಳುವ ಭಯ ಕಾಡುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದ. ನಂತರ ರವಿಯನ್ನು ಭೇಟಿಯಾದ ಟ್ಸಾಕ್ಸಿ ಮಾಲೀಕರ ಸಂಘದ ಸದಸ್ಯರು, ಪೊಲೀಸರಿಗೆ ಶರಣಾಗಿ ಎಲ್ಲ ವಿವರವನ್ನು ತಿಳಿಸುವಂತೆ ಮನವೊಲಿಸಿದ್ದರು. ಆತ ಡಿವೈಎಸ್ಪಿ ಕಚೇರಿಗೆ ಬಂದು ಶರಣಾದ ಎಂದು ಮೂಲಗಳು ತಿಳಿಸಿವೆ.
‘ಜೂನ್ 8ರಂದು ರಾತ್ರಿ ರೇಣುಕಸ್ವಾಮಿ ಹತ್ಯೆಯಾದ ಸುದ್ದಿ ರವಿಗೆ ತಿಳಿದಿತ್ತು. ಕೊಲೆ ಹೊಣೆಯನ್ನು ಹೊತ್ತುಕೊಳ್ಳುವಂತೆ ಇತರ ಆರೋಪಿಗಳು ಈತನಿಗೂ ಆಮಿಷವೊಡ್ಡಿದ್ದರು. ಅದಕ್ಕೆ ಒಪ್ಪದೆ ಕಾರಿನ ಬಾಡಿಗೆ ಮಾತ್ರ ಪಡೆದು ಚಿತ್ರದುರ್ಗಕ್ಕೆ ವಾಪಸ್ ಬಂದೆ. ಭಯದಿಂದಲೇ ತಲೆಮರೆಸಿ ಕೊಂಡಿದ್ದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆ’ ಎಂದು ತಿಳಿಸಿದ. ನಾವು ಆತನ ಜೊತೆ ಮಾತನಾಡಿ ಪೊಲೀಸರಿಗೆ ಶರಣಾಗುವಂತೆ ಮನವೊಲಿಸಿದೆವು’ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿ ಎದುರು ಹಾಜರುಪಡಿಸಿ ಎಂದು ಕೇಳಿಕೊಂಡು ರವಿ ಎನ್ನುವ ವ್ಯಕ್ತಿ ಡಿವೈಎಸ್ಪಿ ಕಚೇರಿಗೆ ಬಂದಿದ್ದಾನೆ. ಆತನನ್ನು ನಾವು ತನಿಖಾಧಿಕಾರಿಗೆ ಒಪ್ಪಿಸುತ್ತೇವೆ. ನಾವು ಆತನ ವಿಚಾರಣೆ ನಡೆಸಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ದರ್ಶನ್ರನ್ನು ನೋಡಿದ ರವಿ
‘ರವಿ ಪಟ್ಟಣಗೆರೆ ಶೆಡ್ ತಲುಪಿದಾಗ ನಟ ದರ್ಶನ್ ಕೆಂಪು ಕಾರಿನಲ್ಲಿ ಬಂದಿದ್ದನ್ನು ನೋಡಿದ್ದಾರೆ. ಆದರೆ ರವಿಯನ್ನು ಒಳಗೆ ಬಿಡದ ಕಾರಣ ಅಲ್ಲಿ ಏನು ನಡೆಯುತ್ತಿದೆ ಎಂಬುದು ಇವರಿಗೆ ಗೊತ್ತಾಗಿರಲಿಲ್ಲ. ಆರೋಪ ಒಪ್ಪಿಕೊಳ್ಳುವಂತೆ ಆಮಿಷ ಒಡ್ಡಿದಾಗಲೇ ರೇಣುಕಸ್ವಾಮಿ ಹತ್ಯೆಯಾದ ವಿಷಯ ರವಿಗೆ ಗೊತ್ತಾಗಿದೆ. ಈ ವಿಚಾರವನ್ನು ರವಿ ನಮಗೆ ತಿಳಿಸಿದ್ದರು‘ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.