ADVERTISEMENT

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 12:18 IST
Last Updated 14 ಅಕ್ಟೋಬರ್ 2024, 12:18 IST
<div class="paragraphs"><p>ದರ್ಶನ್, ಪವಿತ್ರಾ ಗೌಡ</p></div>

ದರ್ಶನ್, ಪವಿತ್ರಾ ಗೌಡ

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಅವರ ಆಪ್ತೆ ಪವಿತ್ರಾಗೌಡ ಹಾಗೂ ಇಬ್ಬರು ಸಹಚರರ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್‌ ನ್ಯಾಯಾಲಯವು ಸೋಮವಾರ ವಜಾಗೊಳಿಸಿತು.

ಇದೇ ಪ್ರಕರಣದ ಎಂಟನೇ ಆರೋಪಿ ರವಿಶಂಕರ್‌ ಹಾಗೂ 13ನೇ ಆರೋಪಿ ದೀಪಕ್‌ಗೆ ಜಾಮೀನು ಮಂಜೂರು ಮಾಡಿತು. ದರ್ಶನ್‌ ಅವರ ವ್ಯವಸ್ಥಾಪಕ ನಾಗರಾಜ್‌, ಕಾರು ಚಾಲಕ ಲಕ್ಷ್ಮಣ್‌ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳೂ ವಜಾಗೊಂಡಿವೆ.

ADVERTISEMENT

ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಕಳೆದ ವಾರ ನ್ಯಾಯಾಲಯದಲ್ಲಿ ಸುದೀರ್ಘವಾದ ವಾದ– ಪ್ರತಿವಾದ ನಡೆದಿತ್ತು. ಜಾಮೀನು ಅರ್ಜಿಗೆ ಸಂಬಂಧಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಧೀಶ ಜೈಶಂಕರ್ ಅವರು ಸೋಮವಾರ ಪ್ರಕಟಿಸಿದರು.‌

ಕೊಲೆ ಪ್ರಕರಣದಲ್ಲಿ ಜೂನ್‌ 11ರಂದು ದರ್ಶನ್‌ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಪೊಲೀಸರ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

‘ದರ್ಶನ್‌ ಅವರ ವಿರುದ್ಧ ಸಾಂದರ್ಭಿಕ ಸಾಕ್ಷ್ಯ ಸೃಷ್ಟಿಸಲಾಗಿದೆ. ತನಿಖಾಧಿಕಾರಿಗಳು ಅತ್ಯುತ್ತಮವಾಗಿ ತನಿಖೆ ನಡೆಸಿದ್ದಾರೆಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ನನ್ನ ಪ್ರಕಾರ ಇದು ಕಳಪೆ ತನಿಖೆ. ಮೃತದೇಹದ ಮೇಲೆ ನಾಯಿ ಕಚ್ಚಿದ ಗುರುತುಗಳಿವೆ. ಇದನ್ನೇ ಹಲ್ಲೆ ಎಂದು ಮಾಧ್ಯಮಗಳು ಬಿಂಬಿಸಿವೆ’ ಎಂದು ದರ್ಶನ್‌ ಪರ ವಕೀಲ ಸಿ.ವಿ. ನಾಗೇಶ್‌ ಅವರು ವಾದ ಮಂಡಿಸಿದ್ದರು.

ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಪ್ರಸನ್ನ ಕುಮಾರ್, ‘ಮರಣೋತ್ತರ ಪರೀಕ್ಷೆಯ ವಿಳಂಬದಿಂದ ತನಿಖೆಗೆ ತೊಂದರೆ ಆಗಿಲ್ಲ. ಊಟ ಮಾಡಿದ ಎರಡು ಗಂಟೆಯಲ್ಲಿ ಸಾವು ಸಂಭವಿಸಿರುವ ಬಗ್ಗೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಶ್ವಾಸಕೋಶಕ್ಕೆ ಸೇರಿದಂತೆ 39ಕ್ಕೂ ಹೆಚ್ಚು ಕಡೆ ಗಾಯಗಳಾಗಿವೆ’ ಎಂದು ಪ್ರತಿಪಾದಿಸಿದ್ದರು.

‘ಪ್ರತ್ಯಕ್ಷ ಸಾಕ್ಷಿದಾರರ ಹೇಳಿಕೆ ದಾಖಲು, ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಲ್ಲಿ ವಿಳಂಬವಾಗಿಲ್ಲ. ಮೃತವ್ಯಕ್ತಿಯ ಚಹರೆ ಪತ್ತೆಯಾದ ಮೇಲೆ ಕುಟುಂಬಸ್ಥರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಎರಡನೇ ಆರೋ‍ಪಿ ಕೃತ್ಯ ನಡೆದ ಸ್ಥಳದಲ್ಲಿ ಇದ್ದರು ಎಂಬುದನ್ನು ಡಿಎನ್‌ಎ ವರದಿ ದೃಢಪಡಿಸಿದೆ. ಪವಿತ್ರಾಗೌಡ ಅವರ ಷಡ್ಯಂತ್ರದಿಂದಲೇ ಈ ಕೃತ್ಯ ನಡೆಸಲಾಗಿದೆ’ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

‘ಸಾಕ್ಷಿದಾರರು ಪತ್ತೆಯಾದ ಬಳಿಕವೇ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಅಲ್ಲೂ ವಿಳಂಬವಾಗಿಲ್ಲ. ಆರೋಪಿಗಳ ಪರ ವಕೀಲರು ಜಪ್ತಿ ಮಾಡಿಕೊಳ್ಳಲಾದ ವಸ್ತುಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ತನಿಖಾಧಿಕಾರಿಗಳು ಪರಿಶೀಲನೆಯ ಬಳಿಕವೇ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ’ ಎಂದು ವಾದಿಸಿದ್ದರು.

‘ಯಾರ ಮೇಲೂ ಸುಮ್ಮನೇ ಆರೋಪ ಮಾಡಿಲ್ಲ. ತನಿಖಾಧಿಕಾರಿಗಳು ತಾಂತ್ರಿಕ ಸಾಕ್ಷ್ಯಾಧಾರ ಕಲೆ ಹಾಕಿದ ಮೇಲೆ ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಿದ್ಧಪಡಿಸಿದ್ದಾರೆ. ತನಿಖೆ ವೇಳೆ ಆರೋಪ ದೃಢವಾಗಿದೆ’ ಎಂದು ಎಸ್‌ಪಿಪಿ ವಾದ ಮಂಡಿಸಿದ್ದರು. ಎಸ್‌ಪಿಪಿ ವಾದ ಆಧರಿಸಿ ನ್ಯಾಯಾಲಯವು ಜಾಮೀನು ಅರ್ಜಿ ವಜಾಗೊಳಿಸಿದೆ.

ಹೈಕೋರ್ಟ್‌ಗೆ ಮೇಲ್ಮನವಿ ಸಾಧ್ಯತೆ
37ನೇ ಸಿಸಿಎಚ್ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡ ಬೆನ್ನಲ್ಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ತಯಾರಿ ನಡೆಸಿದ್ದು ಮಂಗಳವಾರವೇ ಸಲ್ಲಿಕೆ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.