ADVERTISEMENT

ರೇಣುಕಸ್ವಾಮಿ ಕೊಲೆ: 17ನೇ ಆರೋಪಿ ನಿಖಿಲ್‌ ನಾಯಕ್‌ ಜಾಮೀನು ಅರ್ಜಿ ವಾಪಸು

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:25 IST
Last Updated 8 ಜುಲೈ 2024, 15:25 IST
<div class="paragraphs"><p>ರೇಣುಕಸ್ವಾಮಿ </p></div>

ರೇಣುಕಸ್ವಾಮಿ

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 17ನೇ ಆರೋಪಿ ನಿಖಿಲ್‌ ನಾಯಕ್‌ ಜಾಮೀನು ಕೋರಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ವಾಪಸು ಪಡೆದಿದ್ದಾರೆ.

ಈ ಕುರಿತಂತೆ ನಿಖಿಲ್‌ ನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ನ 57ನೇ ಕೋರ್ಟ್‌ ನ್ಯಾಯಾಧೀಶ ಜಯಶಂಕರ್‌ ಸೋಮವಾರ ವಿಚಾರಣೆ ನಡೆಸಿದರು. ಈ ವೇಳೆ ಅರ್ಜಿದಾರ ನಿಖಿಲ್‌ ಪರ ವಕೀಲರು, ಜಾಮೀನು ಕೋರಿಕೆ ಅರ್ಜಿಯನ್ನು ವಾಪಸು ಪಡೆಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ಕಳೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಜಾಮೀನು ಅರ್ಜಿಗೆ ತನ್ನ ಬಲವಾದ ಆಕ್ಷೇಪಣೆ ಸಲ್ಲಿಸಿತ್ತು. ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.

ಆಕ್ಷೇಪಣೆಯಲ್ಲಿ ಏನಿತ್ತು?: ‘ಮೃತ ಶರೀರವನ್ನು ಸಾಗಿಸುವ ಮೂಲಕ ಆರೋಪಿ ನಿತಿನ್‌ ನಾಯಕ್‌ ಸಾಕ್ಷ್ಯ ನಾಶ ಮಾಡಿದ್ದಾರೆ. ಘಟನೆಗೂ ಮುನ್ನ ಮತ್ತು ನಂತರ ಪ್ರಕರಣದ 15ನೇ ಆರೋಪಿ ಕಾರ್ತೀಕ ಅಲಿಯಾಸ್ ಕಪ್ಪೆ ಜೊತೆ ಫೋನ್‌ನಲ್ಲಿ ಮಾತನಾಡಿರುವುದರಿಂದ ಪಿತೂರಿಯ ಪ್ರಮುಖ ಆರೋಪಿ ಎನಿಸಿದ್ದಾರೆ. ಅಂತೆಯೇ, ತನಿಖೆ ಇನ್ನೂ ಬಾಕಿ ಇದೆ. ಪ್ರಕರಣದ ಪ್ರಮುಖ ಆರೋಪಿಯಾದ ಎ–2 ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ’ ಎಂದು ಪ್ರಾಸಿಕ್ಯೂಷನ್‌ ಆತಂಕ ವ್ಯಕ್ತಪಡಿಸಿತ್ತು.

‘ಘಟನೆ ನಂತರ ನಿಖಿಲ್ ನಾಯಕ್‌ ಖುದ್ದು ಪೊಲೀಸರಿಗೆ ಶರಣಾಗಿದ್ದಾರೆ. ಅಲ್ಲದೆ, ನಿಖಿಲ್‌ ಬಳಿಯಿದ್ದ ₹4.5 ಲಕ್ಷ ವಶಪಡಿಸಿಕೊಳ್ಳಲಾಗಿದೆ. ನಿಖಿಲ್‌ ಆಕ್ಷೇಪಿಸಿರುವಂತೆ ಪೊಲೀಸ್ ಕಸ್ಟಡಿಗೆ ಪಡೆಯುವ ಮುನ್ನ ರಿಮ್ಯಾಂಡ್‌ ಅರ್ಜಿ ಸಲ್ಲಿಸಿಲ್ಲ ಎಂಬುದು ಸಮರ್ಥನೀಯವಲ್ಲ. ಆವತ್ತೇ ಆರೋಪಿ ಪರ ವಕೀಲರಿಗೆ ನೀಡಲಾಗಿದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 167 ಮತ್ತು 172ರ ಪ್ರಕಾರ ಈ ಆರೋಪಿಗೆ ರಿಮ್ಯಾಂಡ್‌ ಅರ್ಜಿ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಪಾದಿಸಿತ್ತು. 

ಇದನ್ನು ಒಪ್ಪದೆ, ‘ಅರ್ಜಿ ವಾಪಸು ಪಡೆಯಲು ಅವಕಾಶ ನೀಡಬಾರದು. ನಮ್ಮ ವಾದ ಕೇಳಿ ನಂತರ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಬೇಕು’ ಎಂದು ಕೋರಿದರು. ಅಂತಿಮವಾಗಿ, ನ್ಯಾಯಾಧೀಶರು, ‘ವಾಪಸು ಪಡೆಯಲು ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.