ADVERTISEMENT

ಕಡತ ವಿಲೇವಾರಿ: ಕಂದಾಯ ಇಲಾಖೆಗೆ 2ನೇ ಸ್ಥಾನ– ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 8:41 IST
Last Updated 2 ಆಗಸ್ಟ್ 2023, 8:41 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ಇಲಾಖೆಯಲ್ಲಿ ಈವರೆಗೆ ಬಾಕಿ ಇದ್ದ 3,900 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಆ ಮೂಲಕ, ಹೆಚ್ಚಿನ ಕಾರ್ಯಕ್ಷಮತೆಯಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ತಮ್ಮ ಇಲಾಖೆಯ ಕಾರ್ಯವೈಖರಿ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಈವರೆಗೆ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡಲು ಆದ್ಯತೆ ನೀಡಲಾಗಿದೆ. ಹೊಸದಾಗಿ 2,123 ಕಡತಗಳು ಬಂದಿವೆ. ಈ ಕಡತಗಳನ್ನೂ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದಿದ್ದಾರೆ.

‘ಕಡತಗಳ ವಿಲೇವಾರಿ ವಿಚಾರದಲ್ಲಿ ಕಂದಾಯ ಇಲಾಖೆ ಈವರೆಗೆ 'ಎ' ವರ್ಗದ ಕಾರ್ಯಕ್ಷಮತೆ ಪ್ರದರ್ಶಿಸಿಲ್ಲ. ಆದರೆ, ನಾವು ಕಡತ ವಿಲೇವಾರಿ ವಿಚಾರದಲ್ಲಿ 'ಎ' ವರ್ಗದ ಜೊತೆಗೆ, ಎಲ್ಲ ಇಲಾಖೆಗಳ ಪೈಕಿ ಎರಡನೇ ಸ್ಥಾನದಲ್ಲಿದ್ದೇವೆ. ದೊಡ್ಡ ಇಲಾಖೆಗಳ ಪೈಕಿ ಮೊದಲ ಸ್ಥಾನದಲ್ಲಿದ್ದೇವೆ’ ಎಂದೂ ಹೇಳಿದ್ದಾರೆ.

ADVERTISEMENT

‘ಹಲವು ವರ್ಷಗಳಿಂದ ಬಾಕಿ ಇರುವ ಕಡತಗಳನ್ನು ತ್ವರಿತವಾಗಿ ತೆರವುಗೊಳಿಸುತ್ತೇವೆ. ಅಲ್ಲದೆ, ಪೇಪರ್‌ರಹಿತ ಡಿಜಿಟಲ್ ಸೇವೆ ಸೇರಿದಂತೆ ಏನೆಲ್ಲಾ ಸಾಧ್ಯತೆಗಳಿವೆಯೋ ಅದೆಲ್ಲವನ್ನೂ ಬಳಸಿಕೊಂಡು ಅತ್ಯಂತ ವೇಗವಾಗಿ ಕಡತಗಳನ್ನು ವಿಲೇವಾರಿ ಮಾಡಲು ಇಲಾಖೆ ಬದ್ಧವಾಗಿದೆ. ಉತ್ತಮ ಆಡಳಿತ ನಮ್ಮ ಗುರಿ’ ಎಂದಿದ್ದಾರೆ.

‘ಕಂದಾಯ ಇಲಾಖೆ ಎಲ್ಲ ಇಲಾಖೆಗಳ ಮಾತೃ ಇಲಾಖೆ. ದೊಡ್ಡ ಇಲಾಖೆಯೂ ಹೌದು. ಹೀಗಾಗಿ ಕಡತಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಲೇ ಇರುತ್ತದೆ. ಪರಿಣಾಮ ಇಲಾಖೆ ಸಿಬ್ಬಂದಿಗೆ ಕೆಲಸದ ಒತ್ತಡವೂ ಹೆಚ್ಚು. ಹೀಗಾಗಿ, ಹಲವು ಕಡತಗಳು ವಿಲೇವಾರಿಯಾಗದೆ ಅಲ್ಲೇ ಉಳಿದುಬಿಡುತ್ತವೆ. ಕಂದಾಯ ಇಲಾಖೆಯಲ್ಲಿ ಕಡತಗಳು ಮುಂದಕ್ಕೆ ಹೋಗುವುದೇ ಇಲ್ಲ ಎಂಬ ದೂರುಗಳೂ ಜನರಿಂದ ಕೇಳಿದ್ದೇನೆ. ಹಿಂದಿನ ಈ ಎಲ್ಲ ಪರಿಪಾಠಗಳಿಗೂ ಪೂರ್ಣ ವಿರಾಮ ಇಡುವ ಸಂಕಲ್ಪದೊಂದಿಗೆ ಕಂದಾಯ ಇಲಾಖೆಯು ಈಗ ಕೆಲಸ ನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಕಂದಾಯ ಇಲಾಖೆಯಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದರು. ಅಧಿಕಾರ ವಹಿಸಿದ ಎರಡು ತಿಂಗಳಿನಿಂದ ಇಡೀ ಇಲಾಖೆಗೆ ಚುರುಕು ಮುಟ್ಟಿಸಿ ಎಲ್ಲ ಕಡತಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.