ಬೆಂಗಳೂರು: ‘ಭ್ರಷ್ಟಾಚಾರ, ಕುಟುಂಬ ರಾಜಕಾರಣ ಮತ್ತು ಪಕ್ಷಪಾತದ ಕಾರಣಕ್ಕಾಗಿ ಚುನಾಯಿತ ಪ್ರತಿನಿಧಿಗಳ ಯೋಚನಾ ಶಕ್ತಿಯನ್ನೇ ಕಾಂಗ್ರೆಸ್ ಹಾಳು ಮಾಡಿದೆ. ಅವರ ದಿಕ್ಸೂಚಿಯನ್ನೇ ಬದಲಾಯಿಸಿರುವುದು ದುರಂತ’ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಪ್ರಶಿಕ್ಷಣ ವರ್ಗದಲ್ಲಿ ಅವರು ಮಾತನಾಡಿದರು.
‘ಗ್ರಾಮಪಂಚಾಯಿತಿ ಸದಸ್ಯರಿಗಿರುವ ಅಧಿಕಾರ ದೆಹಲಿಯ ನಾಯಕರಿಗೂ ಇಲ್ಲ. ಅಧಿಕಾರ ಇರುವುದೇ ಸೇವೆ ಮಾಡಲಿಕ್ಕೆ, ಒಂದು ಮೈಕ್ ಮೂಲಕ ನೀರು ಬರುವುದನ್ನು ಜನರಿಗೆ ತಿಳಿಸಬಹುದು. ಜನಸಾಮಾನ್ಯರ ಸಮಸ್ಯೆ
ಗಳನ್ನು ಹತ್ತಿರದಿಂದ ನೋಡಬಹುದು. ಅದನ್ನು ಸದುಪಯೋಗಪಡಿಸಿಕೊಂಡು, ಅವರಿಗೆ ಸವಲತ್ತುಗಳನ್ನು ಕಲ್ಪಿಸಿಕೊಡಬಹುದು’ ಎಂದರು.
‘ಗ್ರಾಮ ಪಂಚಾಯಿತಿಯು ವಿಧಾನಪರಿಷತ್, ವಿಧಾನಸಭೆಗೆ ಹೆಬ್ಬಾಗಿಲು ಇದ್ದಂತೆ. ವಿಧಾನಪರಿಷತ್ ಪ್ರವೇಶಿಸಲು ಇಚ್ಛೆ ಇರುವವರೇ ಹೆಚ್ಚಾಗಿ ಗ್ರಾಮಪಂಚಾಯಿತಿಗಳನ್ನು ಪ್ರವೇಶಿಸುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಇಂಥವರಿದ್ದಾರೆ’ ಎಂದು ಅವರು ಹೇಳಿದರು.
‘ದೇಶದಲ್ಲಿ ಚೆಕ್ಗೆ ಸಹಿ ಮಾಡುವ ಅಧಿಕಾರವನ್ನು ಕೇವಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಬೇರೆ ಯಾವುದೇ ಜನಪ್ರತಿನಿಧಿಗಳಿಗೆ ಆ ಅಧಿಕಾರ ಇಲ್ಲ’ ಎಂದು ಸಂತೋಷ್ ವಿವರಿಸಿದರು.
‘ಗ್ರಾಮ ಪಂಚಾಯಿತಿಗಳು ಮೊದಲಿನಿಂದಲೂ ಇವೆ. ಸ್ವಾತಂತ್ರ್ಯ ಬಂದಾಗಿನಿಂದ ಕಾಮಗಾರಿಗಳು ನಡೆದಿವೆ. ಇಷ್ಟಾದರೂ ಕೊಳೆಗೇರಿಗಳಿವೆ, ಹಿಂದುಳಿದ ಗ್ರಾಮಗಳಿವೆ. ನಮ್ಮ ಕೆಲಸಗಳಿಂದ ನಮ್ಮನ್ನು ಗುರುತಿಸುವಂತೆ ಆಗಬೇಕಿತ್ತು. 30 ವರ್ಷಗಳು ಕಳೆದರೂ ನೀರ್ ಸಾಬ್ ಎಂದೇ ಕರೆಯಲ್ಪಡುವ ಅಬ್ದುಲ್ ನಜೀರ್ ಸಾಬ್ ಯಾರಿಗೆ ಗೊತ್ತಿಲ್ಲ ಹೇಳಿ, ಅವರ ರೀತಿಯಲ್ಲಿ ನಾವು ಮಾಡುವ ಕೆಲಸದಿಂದ ಜನರು ನಮ್ಮ ಗುರುತು ಹಿಡಿಯುವಂತಾಗಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.