ADVERTISEMENT

ಬಾಂಗ್ಲಾ, ಭಾರತದ ನಡುವಿನ ನ್ಯಾಯಾಂಗ ಅನ್ಯೋನ್ಯತೆ ಅನುಪಮ: ನ್ಯಾ.ದೀಕ್ಷಿತ್‌

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:26 IST
Last Updated 16 ಮೇ 2024, 15:26 IST
ಬಾಂಗ್ಲಾ ಸುಪ್ರೀಂ ಕೋರ್ಟ್‌ ವತಿಯಿಂದ ಕೊಡಮಾಡಲಾದ ಸ್ಮರಣಿಕೆಯನ್ನು ನ್ಯಾಯಾಧೀಶ ಮುಸ್ತಾಕ್‌ ಅಹಮದ್‌ (ಎಡದಿಂದ ಎರಡನೆಯವರು) ಅವರು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿಗೆ ನೀಡಿದರು.
ಬಾಂಗ್ಲಾ ಸುಪ್ರೀಂ ಕೋರ್ಟ್‌ ವತಿಯಿಂದ ಕೊಡಮಾಡಲಾದ ಸ್ಮರಣಿಕೆಯನ್ನು ನ್ಯಾಯಾಧೀಶ ಮುಸ್ತಾಕ್‌ ಅಹಮದ್‌ (ಎಡದಿಂದ ಎರಡನೆಯವರು) ಅವರು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿಗೆ ನೀಡಿದರು.   

ಬೆಂಗಳೂರು: ‘ಬಾಂಗ್ಲಾ ಮತ್ತು ಭಾರತದ ನಡುವಿನ ನ್ಯಾಯಾಂಗ ಕ್ಷೇತ್ರದ ಅನ್ಯೋನ್ಯತೆ ಮಧುರವಾಗಿದೆ’ ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಬಣ್ಣಿಸಿದರು.

ನ್ಯಾಯಾಂಗ ಕ್ಷೇತ್ರದ ಕೊಡುಕೊಳ್ಳುವಿಕೆಯ ಭಾಗವಾಗಿ ನಗರದ ನ್ಯಾಯಾಂಗ ಅಕಾಡೆಮಿಯಲ್ಲಿ ಬಾಂಗ್ಲಾ ದೇಶದ 50 ಜಿಲ್ಲಾ ನ್ಯಾಯಾಧೀಶರಿಗೆ ನಡೆಸಲಾದ ಏಳು ದಿನಗಳ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಾಂಗ್ಲಾ ದೇಶವು, ಭಾರತದ ಮಗಳಿದ್ದಂತೆ ಎಂದರು.

‘ಬಾಂಗ್ಲಾ ಮೊದಲಿಗೆ ಪಾಕಿಸ್ತಾನದ ಭಾಗವಾಗಿತ್ತು. ಆದರೆ, 1971ರಲ್ಲಿ ಅದನ್ನು ಭಾರತ ಸ್ವತಂತ್ರಗೊಳಿಸಿತು. ಮಾತ್ರವಲ್ಲ ಬಾಂಗ್ಲಾದ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿ ಅದನ್ನು ಕಡ್ಡಾಯವಾಗಿ ಬಳಸುವಂತೆ ಕಾನೂನು ಮಾಡಿತ್ತು. ಇದು ಭಾರತ ಬಾಂಗ್ಲಾದ ಬಗ್ಗೆ ಹೊಂದಿದ್ದ ಕಾಳಜಿ’ ಎಂದು ವಿವರಿಸಿದರು.

ADVERTISEMENT

ಬಾಂಗ್ಲಾದ ರಾಷ್ಟ್ರಗೀತೆ, ‘ಅಮರ್‌ ಶೋನಾರ್ ಬಾಂಗ್ಲಾ’ ಮತ್ತು ಭಾರತದ ‘ರಾಷ್ಟ್ರಗೀತೆ ಜನಗಣ ಮನ’ ಬರೆದವರು ರವೀಂದ್ರನಾಥ್ ಟ್ಯಾಗೋರ್. ನಮ್ಮಿಬ್ಬರ ನಡುವೆ ದಟ್ಟವಾದ ಸಾಂಸ್ಕೃತಿಕ ಸಾಮ್ಯತೆ ಇದೆ. ಕೆಲವೊಮ್ಮೆ ರಾಜಕೀಯ ಕಣ್ಣಾಮುಚ್ಚಾಲೆ ನಡೆಯುತ್ತಿರುತ್ತದೆಯಾದರೂ, ನ್ಯಾಯಾಂಗ ಕ್ಷೇತ್ರ ಮಾತ್ರ ಪರಸ್ಪರ ಪ್ರೀತಿಯ ಬಾಂಧವ್ಯ ಹೊಂದಿದೆ ಎಂದರು.

‘ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ ಎಂಬ ಜಿ.ಎಸ್.ಶಿವರುದ್ರಪ್ಪ ಅವರ ಕವಿತೆ, ಸಿದ್ದೇಶ್ವರ ಸ್ವಾಮೀಜಿಗಳ ಅನುಭಾವದ ನುಡಿ ಮತ್ತು ಗೋಪಾಲಕೃಷ್ಣ ಅಡಿಗರ ಮಲ್ಲಿಗೆಯ ಮೆದುತನದ ಕವಿತೆಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ದೀಕ್ಷಿತ್‌ ಅವರು, ‘ಭಾರತದ ಸಿವಿಲ್‌ ಮತ್ತು ಕ್ರಿಮಿನಲ್‌ ನ್ಯಾಯ ಸಂಹಿತೆ ಹಾಗೂ ನ್ಯಾಯಾಂಗ ಆಡಳಿತದ ಜ್ಞಾನವನ್ನು ಹಂಚಿಕೊಳ್ಳುವ ಇಂತಹ ಕಾರ್ಯಕ್ರಮಗಳು ಉಭಯ ದೇಶಗಳ ಪ್ರಬಲ ಸಾಂವಿಧಾನಿಕ ತತ್ವಗಳ ವಿನಿಮಯಕ್ಕೆ ಸಾಕ್ಷಿಯಾಗಿವೆ’ ಎಂದರು. 

ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನಿರ್ದೇಶಕರಾದ ನ್ಯಾಯಾಧೀಶ ನರಹರಿ ಪ್ರಭಾಕರ ಮರಾಠೆ ಏಳು ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.