ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು ಬೆಂಗಳೂರಿಗೆ ವಾಪಸ್ ಆಗುವುದನ್ನು ಮತ್ತೆ ಮುಂದೂಡಿದ್ದಾರೆ.
ಪ್ರಜ್ವಲ್, ಜರ್ಮನಿಯ ಮ್ಯೂನಿಕ್ ನಗರದಿಂದ ಬೆಂಗಳೂರಿಗೆ ಬುಧವಾರ ಮಧ್ಯಾಹ್ನ ಹೊರಟಿದ್ದು, ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಲಭಿಸಿತ್ತು. ಗುರುವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆಯಿತ್ತು. ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳು ನಿಗಾ ವಹಿಸಿದ್ದರು. ಆದರೆ, ಜರ್ಮನಿಯಿಂದ ಬುಧವಾರ ಮಧ್ಯಾಹ್ನ ಹೊರಟ ವಿಮಾನದಲ್ಲಿ ಪ್ರಜ್ವಲ್ ಪ್ರಯಾಣಿಸಿಲ್ಲ ಎಂಬ ಮಾಹಿತಿ ಸಂಜೆ ವೇಳೆಗೆ ಎಸ್ಐಟಿಗೆ ಲಭಿಸಿತು.
ಈ ಹಿಂದೆಯೂ ಎರಡು ಬಾರಿ ವಿಮಾನ ಟಿಕೆಟ್ ಬುಕ್ ಮಾಡಿದ್ದ ಪ್ರಜ್ವಲ್ ಕೊನೆಕ್ಷಣದಲ್ಲಿ ರದ್ದುಪಡಿಸಿದ್ದರು.
ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಪ್ರಜ್ವಲ್ ಅವರು ವಾಪಸ್ ಆಗುವ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿತ್ತು ಎಂದು ಮೂಲಗಳು ಹೇಳಿವೆ.
ರೇವಣ್ಣ ಅವರು ಹೊಳೆನರಸೀಪುರಕ್ಕೆ ತೆರಳದೆ ನಗರದಲ್ಲೇ ಇದ್ದು ಪ್ರಕರಣದ ಕುರಿತು ವಕೀಲ ಸಿ.ವಿ.ನಾಗೇಶ್ ಅವರ ಬುಧವಾರ ಜೊತೆಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.