ADVERTISEMENT

ಪ್ರಜ್ವಲ್‌ ರೇವಣ್ಣ ಕುಟುಂಬದವರೇ ಉತ್ತರ ಕೊಡಬೇಕು: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 16:22 IST
Last Updated 28 ಏಪ್ರಿಲ್ 2024, 16:22 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದು, ಪ್ರಪಂಚದ ಅತಿ ದೊಡ್ಡ ಲೈಂಗಿಕ ಹಗರಣ. ಈ ಬಗ್ಗೆ ಪ್ರಜ್ವಲ್‌ ರೇವಣ್ಣನ ಕುಟುಂಬದವರೇ ಉತ್ತರ ಕೊಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರಜ್ವಲ್‌ ರೇವಣ್ಣನ ತಾತ ದೇವೇಗೌಡರು, ಚಿಕ್ಕಪ್ಪ ಎಚ್‌.ಡಿ. ಕುಮಾರಸ್ವಾಮಿ, ತಂದೆ ಎಚ್‌.ಡಿ.ರೇವಣ್ಣ, ತಾಯಿ ಭವಾನಿ ಉತ್ತರಿಸಬೇಕು’ ಎಂದು ಸವಾಲು ಹಾಕಿದರು.

‘ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರಲ್ಲ, ಈಗ ಹೇಳಿ ಯಾರು ದಾರಿ ತಪ್ಪಿದ್ದು’ ಎಂದು ಕುಮಾರಸ್ವಾಮಿಯನ್ನು ಅವರು ಪ್ರಶ್ನಿಸಿದರು.‌‌

ADVERTISEMENT

‘ಮನೆಯಲ್ಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದರೂ ಸುಮ್ಮನಿದ್ದ ನೀವು  ಈ ಅಪರಾಧದಲ್ಲಿ ಭಾಗಿ ಆಗಿದ್ದೀರಿ’ ಎಂದು ದೇವೇಗೌಡ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ತನಿಖೆಯಿಂದ ಸತ್ಯಾಂಶ ಹೊರಗಡೆ ಬರಲಿ. ತಪ್ಪುಮಾಡಿದವರಿಗೆ ಶಿಕ್ಷಯಾಗಲಿ’ ಎಂದರು.

‘ನಾನು ವಿಶ್ವಗುರು ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರಲ್ಲ, ವಿಶ್ವದಲ್ಲಿ ಎಲ್ಲೇ ಇದ್ದರೂ ಪ್ರಜ್ವಲ್‌ ರೇವಣ್ಣನನ್ನು ಪತ್ತೆ ಮಾಡಲಿ. ಮೋದಿಯವರ ಬಳಿ ಸಿಬಿಐ, ಇ.ಡಿ, ಐ.ಟಿ ಮುಂತಾದ ಏಜೆನ್ಸಿಗಳಿವೆಯಲ್ಲ. ಮಾಂಗಲ್ಯ ಕಿತ್ತವರನ್ನು ರಕ್ಷಣೆ ಮಾಡಲು ಈ ಏಜೆನ್ಸಿಗಳಿವೆಯೇ? ಮಹಿಳೆಯರ ಮಾಂಗಲ್ಯ ಕಿತ್ತ ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರಲ್ಲ. ಈ ಹಗರಣದ ಬಗ್ಗೆ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲವಲ್ಲ. ನಿಮಗೆ ನಾಚಿಗೆ ಆಗುವುದಿಲ್ಲವೇ’ ಎಂದೂ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.