ADVERTISEMENT

ಸೌಜನ್ಯ ಕೊಲೆ ಪ್ರಕರಣ: ಸೋನಿಯಾ ಗಾಂಧಿ ನಿವಾಸ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 16:21 IST
Last Updated 2 ಮಾರ್ಚ್ 2024, 16:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಆಕೆಯ ತಾಯಿ ಹಾಗೂ ದಕ್ಷಿಣ ಕನ್ನಡದ ಹೋರಾಟಗಾರರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. 

ಪ್ರತಿಭಟನೆಯ ನಂತರ, ಗಾಂಧಿಯವರ ಆಪ್ತ ಸಹಾಯಕರೊಬ್ಬರು ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಭೇಟಿಯಾಗಿ ಅಗತ್ಯ ನೆರವಿನ ಭರವಸೆ ನೀಡಿದರು. 

‘ಸೋನಿಯಾ ಗಾಂಧಿಯವರು ಅಸ್ವಸ್ಥರಾಗಿದ್ದರಿಂದ ಅವರ ಆಪ್ತರೊಬ್ಬರು ನಮ್ಮ ಕಷ್ಟವನ್ನು ಆಲಿಸಿದರು. ಪ್ರಕರಣದ ಮರುತನಿಖೆ ಮತ್ತು ನಮಗೆ ನ್ಯಾಯ ದೊರಕಿಸಿಕೊಡಲು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು’ ಎಂದು ತಾಯಿ ಕುಸುಮಾವತಿ ಗೌಡ ತಿಳಿಸಿದರು. 

ADVERTISEMENT

‘ಮಗಳನ್ನು ಅತ್ಯಾಚಾರವೆಸಗಿ ಘೋರವಾಗಿ ಕೊಲೆ ಮಾಡಲಾಗಿದೆ. ಸೋನಿಯಾ ಅವರ ಭರವಸೆಯು ಮಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೆ, ಇಷ್ಟಕ್ಕೆ ನಾವು ಮೈಮರೆಯುವುದಿಲ್ಲ. ನ್ಯಾಯ ಸಿಗುವವರೆಗೆ ನಿರಂತರ ಹೋರಾಟ ಮಾಡಲಿದ್ದೇವೆ’ ಎಂದು ಅವರು ಹೇಳಿದರು. 

‘ಮಗಳನ್ನು ಕೊಲೆ ಮಾಡಿದವರು ಪ್ರಭಾವಿಗಳು. ಆದರೆ, ಅವರನ್ನು ಬಂಧಿಸಿಲ್ಲ. ಪ್ರಭಾವಿ ವ್ಯಕ್ತಿಗಳು ತನಿಖಾಧಿಕಾರಿಗಳು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಕರಣ ಮುಚ್ಚಿ ಹಾಕಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಪ್ರಕರಣದ ನಿಷ್ಫಕ್ಷಪಾತ ತನಿಖೆ ಆಗಬೇಕು. ಆ ಮೂಲಕ ನ್ಯಾಯ ಕೊಡಿಸಬೇಕು’ ಎಂದು ಅವರು ಆಗ್ರಹಿಸಿದರು. 

ಹೋರಾಟಗಾರರಾದ ಮಹೇಶ ಶೆಟ್ಟಿ ತಿಮರೋಡಿ, ಭಾವನಾ ಮತ್ತಿತರರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.