ADVERTISEMENT

ನಕ್ಸಲ್‌ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯ: ಸರ್ಕಾರಕ್ಕೆ ಶಿಫಾರಸು

ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಶಿಫಾರಸು

ಚಂದ್ರಹಾಸ ಹಿರೇಮಳಲಿ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಶರಣಾಗತರಾದ ನಕ್ಸಲರ ಮೇಲೆ ದಾಖಲಾಗಿರುವ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ‘ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿ’ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಪಶ್ಚಿಮಘಟ್ಟ ಸೇರಿದಂತೆ ರಾಜ್ಯದ ಹಲವೆಡೆ ಎಡಪಂಥೀಯ ತೀವ್ರಗಾಮಿ ಸಂಘಟನೆ ಚಟುವಟಿಕೆಗಳು ಸಕ್ರಿಯವಾಗಿದ್ದಾಗ, ಸ್ಥಳೀಯ ಯುವಜನರು ಸಂಘಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡಯಾಗಿದ್ದರು. ನಿರುದ್ಯೋಗ, ಅಸಮಾನತೆ, ಮೂಲಸೌಕರ್ಯಗಳ ಅಭಿವೃದ್ಧಿ ಕಲ್ಪಿಸದ ಆಡಳಿತದ ಧೋರಣೆ
ಗಳ ವಿರುದ್ಧ ಆಕ್ರೋಶಗೊಂಡಿದ್ದ ಯುವಕರ ಸಂಘಟಿಸಿ, ಚಳವಳಿ ಕಟ್ಟಲು ನಕ್ಸಲರು ಮುಂದಾಗಿದ್ದರು.

ADVERTISEMENT

ಚಳವಳಿ ಹತ್ತಿಕ್ಕಲು ರಚಿಸಲಾಗಿದ್ದ ನಕ್ಸಲ್‌ ನಿಗ್ರಹ ಪಡೆಯು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ತೀವ್ರ ಗೊಳಸಿತ್ತು. ಕೆಲ ನಕ್ಸಲರ ಹತ್ಯೆಯನ್ನೂ ಮಾಡಿತ್ತು. ಇದೇ ಸಮಯದಲ್ಲಿ ರಾಜ್ಯ ಸರ್ಕಾರ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರ ಶರಣಾಗತಿಗೆ ಅವಕಾಶ ಮಾಡಿಕೊಟ್ಟಿತ್ತು. ಶರಣಾಗತ
ರಾದವರಿಗೆ 2015ರಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಿತ್ತು. 

ಇತ್ಯರ್ಥವಾಗದ ಹಲವು ಪ್ರಕರಣ: 
 ಭೂಗತರಾಗಿದ್ದ 15 ನಕ್ಸಲರು, ಸರ್ಕಾರ ಶರಣಾಗತಿ ಪ್ಯಾಕೇಜ್‌ ಘೋಷಿಸಿದ ನಂತರ ಶರಣಾಗಿದ್ದರು. ಅವರಲ್ಲಿ 14 ಮಂದಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಒಬ್ಬ ಮಹಿಳೆ ಜೈಲಿನಲ್ಲೇ ಇದ್ದಾರೆ. ಒಂದು ದಶಕವಾದರೂ ಅವರಿಗೆ ಜಾಮೀನು ದೊರೆತಿಲ್ಲ. ಪ್ರಕರಣಗಳ ವಿಚಾರಣೆಯೂ ಪೂರ್ಣ
ಗೊಂಡಿಲ್ಲ. ಜಾಮೀನಿನ ಮೇಲೆ ಹೊರಗೆ ಬಂದ ಕೆಲವರ ಮೇಲಿದ್ದ ಪ್ರಕರಣಗಳು ಖುಲಾಸೆಯಾಗಿದ್ದರೆ, ಇನ್ನೂ ಹಲವರ ಮೇಲಿನ ಪ್ರಕರಣಗಳ ವಿಚಾರಣೆ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿವೆ. 

‘ನಕ್ಸಲ್‌ ಚಟುವಟಿಕೆಗಳು ತೀವ್ರವಾಗಿದ್ದಾಗ ಹಲವರ ಮೇಲೆ ಪ್ರಕರಣ ದಾಖಲಾಗಿದ್ದವು. ದಶಕ ಕಳೆದರೂ
ಇತ್ಯರ್ಥವಾಗಿಲ್ಲ. ಇಂದಿಗೂ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ.ಹಾಗಾಗಿ, ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ’ ಎನ್ನುತ್ತಾರೆ ವಕೀಲ
ಕೆ.ಪಿ.ಶ್ರೀಪಾಲ್.

ಸಶಸ್ತ್ರಕ್ರಾಂತಿ ಮಾರ್ಗ ತ್ಯಜಿಸಿ, ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ನಡೆಸಲು ಭೂಗತ ಮಾವೋವಾದಿಗಳಿಗೆ ಮನವರಿಕೆ ಮಾಡುತ್ತಿದ್ದೇವೆ 
ಬಂಜಗೆರೆ ಜಯಪ್ರಕಾಶ್‌, ಸದಸ್ಯ ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿ
ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾದಾಗ ಮಾತ್ರ ನಕ್ಸಲರಿಗೆ ನೀಡುವ ನೆರವು ಪ್ರಯೋಜನವಾಗುತ್ತದೆ. ಇಲ್ಲದಿದ್ದರೆ ಪ್ರಯತ್ನ ಫಲ ನೀಡದು
ಕೆ.ಪಿ. ಶ್ರೀಪಾಲ್, ಸದಸ್ಯ ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಸಮಿತಿ
ದಶಕ ಕಳೆದರೂ ದೊರೆತಿಲ್ಲ ಪ್ಯಾಕೇಜ್!
ಶರಣಾಗತರಾದ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿತ್ತು. ನಕ್ಸಲ್ ಚಳವಳಿಯಲ್ಲಿದ್ದ ರಾಜ್ಯದವರು, ಹೊರ ರಾಜ್ಯದವರ ಅವರ ಚಟುವಟಿಕೆ, ಮೊಕದ್ದಮೆಗಳ ಆಧಾರದಲ್ಲಿ ಮೂರು ವರ್ಗಗಳಾಗಿ ವಿಂಗಡಿಸಿ, ₹2 ಲಕ್ಷದಿಂದ ₹5 ಲಕ್ಷದವರೆಗೆ ನಗದು, ಕೃಷಿ ಮಾಡಲು ಬಯಸುವವರಿಗೆ ತಲಾ ಎರಡು ಎಕರೆ ಜಮೀನು, ವಿವಿಧ ವೃತ್ತಿಪರ ತರಬೇತಿ ಪಡೆಯಲು ಬಯಸುವವರಿಗೆ ಒಂದು ವರ್ಷದವರೆಗೆ ಪ್ರತಿ ತಿಂಗಳು ತಲಾ ₹5,000 ನೆರವು ನಿಗದಿ ಮಾಡಿತ್ತು. ಅಂದು ಮೊದಲ ಕಂತು ನೀಡಿದ್ದ ಸರ್ಕಾರ ಉಳಿದದ್ದನ್ನು ಈವರೆಗೆ ಪಾವತಿಸಿಲ್ಲ. ಕೆಲವರಿಗೆ ಜಮೀನು ಮಂಜೂರಾದರೂ ಅರಣ್ಯ ಕಾಯ್ದೆ, ಭೂ ಮಂಜೂರಾತಿ ಮತ್ತಿತರ ಕಾರಣಗಳಿಂದ ಭೂ ಒಡೆತನವೂ ಸಿಕ್ಕಿಲ್ಲ.
ನಗದು ನೆರವು ಹೆಚ್ಚಳ
ಪ್ರಮುಖ ನಕ್ಸಲರು ಹತ್ಯೆಯಾಗಿ, ಕೆಲವರು ಶರಣಾಗತರಾಗಿದ್ದರೂ, ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿಲ್ಲ. ಇನ್ನೂ ಭೂಗತರಾಗಿರುವವರಿಗೆ ಶರಣಾಗಲು ರಾಜ್ಯ ಸರ್ಕಾರ ಮತ್ತೆ ಅವಕಾಶ ಮಾಡಿಕೊಟ್ಟಿದೆ. ಶರಣಾಗತಿ ಮತ್ತು ಪುನರ್ವಸತಿ ಯೋಜನೆಯನ್ನೂ ಪರಿಷ್ಕರಿಸಿದೆ. ಸ್ವಾವಲಂಬಿ ಬದುಕಿಗಾಗಿ ವೃತ್ತಿಪರ ತರಬೇತಿ ಪಡೆಯಲು ಇದ್ದ ಒಂದು ವರ್ಷದ ಮಿತಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಿದೆ. ನಗದು ನೆರವನ್ನೂ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.