ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ (2024–25) ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಮಂಗಳವಾರದಿಂದ (ಜೂನ್ 25) ಜುಲೈ 9ರವರೆಗೆ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಲ್ಲ ವೃಂದಗಳಿಗೆ (ಗ್ರೂಪ್ ಎ, ಬಿ, ಸಿ, ಡಿ) ಅನ್ವಯವಾಗುವಂತೆ, ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ 6ರನ್ನು ಮೀರದಂತೆ ವರ್ಗಾವಣೆ ಪ್ರಕ್ರಿಯೆ ನಡೆಸುವ ಅಧಿಕಾರವನ್ನು ಆಯಾ ಇಲಾಖೆಗಳ ಸಚಿವರಿಗೆ ನೀಡಲಾಗಿದೆ.
ಅಸ್ತಿತ್ವದಲ್ಲಿರುವ ನಿಯಮಗಳ ಅನುಸಾರ ವರ್ಗಾವಣೆ ಪ್ರಕ್ರಿಯೆ ಏಪ್ರಿಲ್ ಮೊದಲ ವಾರ ಆರಂಭವಾಗಿ ಮೇ ಅಂತ್ಯದಲ್ಲಿ ಮುಕ್ತಾಯವಾಗಬೇಕು. ಈ ಬಾರಿ ಲೋಕಸಭೆಯ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗಿದೆ.
ಒಂದೇ ಕೇಂದ್ರ ಸ್ಥಾನದಲ್ಲಿರುವ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಮಾಡುವ ಸ್ಥಳ ನಿಯುಕ್ತಿಯನ್ನು (ಚಲನವಲನ) ವರ್ಗಾವಣೆ ಎಂದು ಪರಿಗಣಿಸಲಾಗುವುದಿಲ್ಲ. ಸಚಿವಾಲಯದಲ್ಲಿ ಕರ್ತವ್ಯಕ್ಕೆ ಸೇರಿದ ನೌಕರನನ್ನು ಸಚಿವಾಲಯದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಮಾಡುವ ಸ್ಥಳ ನಿಯುಕ್ತಿಗೂ ಇದು ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೌಕರನ ಮೇಲೆ ಗಂಭೀರ ಆರೋಪಗಳಿದ್ದರೆ, ಇಲಾಖಾ ವಿಚಾರಣೆ, ಕ್ರಿಮಿನಲ್ ನಡಾವಳಿ ಆರಂಭಿಸಿದ್ದರೆ ಅಥವಾ ಬಾಕಿ ಇದ್ದರೆ ಅಂಥವರನ್ನು ಸೂಕ್ಷ್ಮ ಹುದ್ದೆಗಳಿಗೆ ಅಥವಾ ಕಾರ್ಯಕಾರಿ ಹುದ್ದೆಗಳಿಗೆ ನೇಮಿಸದೆ, ತಮ್ಮ ವಿರುದ್ಧ ಬಾಕಿ ಇರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲದ ಕಾರ್ಯಕಾರಿಯೇತರ ಹುದ್ದೆಗೆ ನೇಮಿಸಬೇಕು. ಇಲಾಖೆ ವಿಚಾರಣೆ, ಕ್ರಿಮಿನಲ್ ಮೊಕದ್ದಮೆ ಬಾಕಿ ಇರುವ ನೌಕರನನ್ನು ಆತ ಕೋರುವ ಹುದ್ದೆಗೆ ಸ್ಥಳ ನಿಯುಕ್ತಿ ಮಾಡಬಾರದು ಎಂದೂ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.