ADVERTISEMENT

ಅಕ್ರಮ ಆಸ್ತಿ ಗಳಿಕೆ ಪ್ರಕರಣ: DK ಶಿವಕುಮಾರ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2024, 7:47 IST
Last Updated 15 ಜುಲೈ 2024, 7:47 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

(ಪ್ರಜಾವಾಣಿ ಚಿತ್ರ)

ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ಸಿಬಿಐ ದಾಖಲಿಸಿ ರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ADVERTISEMENT

ಶಿವಕುಮಾರ್ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರ ವಾದವನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್‌ ಚಂದ್ರ ಶರ್ಮಾ ಪೀಠವು ಶಿವಕುಮಾರ್‌ ಅರ್ಜಿಯನ್ನು ವಜಾಗೊಳಿಸಿತು. 

‘ಅರ್ಜಿದಾರರದ್ದು ಎಂದು ಹೇಳ ಲಾದ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು 2017ರ ಆಗಸ್ಟ್‌ 2ರಂದು ದಾಳಿ ನಡೆಸಿದ್ದರು. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕ್ರಿಯೆಗಳು ನಡೆಯಲು ಸಾಧ್ಯವಿಲ್ಲ. ಆದಾಯ ತೆರಿಗೆ ಇಲಾಖೆಯ ಪ್ರಕ್ರಿಯೆ ಜಾರಿಯಲ್ಲಿರುವಾಗ ಸಿಬಿಐ ಮತ್ತೊಂದು ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ’ ಎಂದು ರೋಹಟಗಿ ವಾದಿಸಿದರು.  

‘2018ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 17ಎ ಪ್ರಕಾರ ಜನಪ್ರತಿ ನಿಧಿಗಳ ವಿಚಾರಣೆ ನಡೆಸುವ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಈ ನಿಯಮದ ಅನುಸಾರ ಪೂರ್ವಾನುಮತಿ ಪಡೆಯುವವರೆಗೆ ತನಿಖೆ ಮತ್ತು ವಿಚಾರಣೆಗೆ ಅವಕಾಶ ಇಲ್ಲ. ಎಫ್‌ಐಆರ್ ದಾಖಲಾಗಿರುವುದು 2020ರ ಅಕ್ಟೋಬರ್‌ 3ರಂದು. ಆದ್ದ ರಿಂದ ಸೆಕ್ಷನ್‌ 17ಎ ಇದಕ್ಕೆ ಅನ್ವಯ ವಾಗುತ್ತದೆ’ ಎಂದು ಪ್ರತಿಪಾದಿಸಿದರು.

ಪ್ರಕರಣವೇನು?: 2013ರ ಏಪ್ರಿಲ್‌ 1ರಿಂದ 2018ರ ಏಪ್ರಿಲ್‌ 30ರ ಅವಧಿಯಲ್ಲಿ ಶಿವಕುಮಾರ್ ಅಕ್ರಮವಾಗಿ ₹74.93 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಎಫ್‌ಐಆರ್ ದಾಖಲಿಸಿತ್ತು. 

2013ರ ಮಾರ್ಚ್‌ 31ರ ವೇಳೆಗೆ ಶಿವಕುಮಾರ್‌ ಕುಟುಂಬ
₹33.92 ಕೋಟಿ ಆಸ್ತಿ ಹೊಂದಿತ್ತು. ಐದು ವರ್ಷಗಳಲ್ಲಿ ಅವರ ಕುಟುಂಬ
₹166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ ₹ 113.12 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಅಂಶ ಸಿಬಿಐ ಎಫ್‌ಐಆರ್‌ನಲ್ಲಿತ್ತು.

2018ರ ಏ.30ರ ವೇಳೆಗೆ ಆರೋಪಿತರ ಕುಟುಂಬ ₹128.60 ಕೋಟಿ ಆಸ್ತಿ ಹೊಂದಿತ್ತು. ವರಮಾನ, ಸ್ವೀಕೃತಿ ಮತ್ತು ವೆಚ್ಚಕ್ಕೆ ಹೋಲಿಸಿದರೆ ಶೇಕಡ 44.93ರಷ್ಟು ಹೆಚ್ಚುವರಿ ಆಸ್ತಿ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿತ್ತು. ಶಿವಕುಮಾರ್‌ ವಿರುದ್ಧ 2020ರ ಅ. 3ರಂದು ಪ್ರಕರಣ ದಾಖಲಿಸಿದ್ದ ಸಿಬಿಐ, ತನಿಖೆ ನಡೆಸುತ್ತಿತ್ತು. ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್‌ ಸರ್ಕಾರ, ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿ ಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಸಿಬಿಐ ಪ್ರಶ್ನಿಸಿದ್ದು, ವಿಚಾರಣಾ ಹಂತದಲ್ಲಿದೆ.

ಹೈಕೋರ್ಟ್ ಆದೇಶಕ್ಕೆ ನ್ಯಾಯಪೀಠ ಅಚ್ಚರಿ

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಜನಪ್ರತಿನಿಧಿಗಳ ವಿರುದ್ಧ ತನಿಖೆ ಮತ್ತು ವಿಚಾರಣೆ ನಡೆಸುವ ಮುನ್ನ ಪೂರ್ವಾನುಮತಿ ಪಡೆಯಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ 2024ರ ಜನವರಿ 16ರಂದು ಸುಪ್ರೀಂ ಕೋರ್ಟ್‌ ವಿಭಜಿತ ತೀರ್ಪು ನೀಡಿದೆ. ಇದನ್ನು ಪ್ರಸ್ತಾಪಿಸಿದ ಮುಕುಲ್‌ ರೋಹಟಗಿ, ‘ಈ ವಿಷಯವು ವಿಸ್ತೃತ ಪೀಠದ ಮುಂದಿದ್ದರೂ ಸೆಕ್ಷನ್‌ 17ಎ ನಿಯಮಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ನನ್ನ ವಾದದ ಪರವಾಗಿದ್ದಾರೆ’ ಎಂದರು. ಆಗ ನ್ಯಾಯಪೀಠವು ‘ಯಾವುದೇ ಪ್ರಕರಣವನ್ನು ರದ್ದುಗೊಳಿಸಲು ವಿಭಜಿತ ತೀರ್ಪು ಆಧಾರವಾಗದು’ ಎಂದು ಅಭಿಪ್ರಾಯಪಟ್ಟಿತು. 

ಆಗ ರೋಹಟಗಿ, ‘ಅರ್ಜಿದಾರರ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣವನ್ನು ಸು‌ಪ್ರೀಂ ಕೋರ್ಟ್ ಈಗಾಗಲೇ ರದ್ದುಗೊಳಿಸಿದೆ’ ಎಂದರು. ಆದರೆ, ನ್ಯಾಯಪೀಠ, ‘ಸಿಬಿಐ ಪ್ರಕರಣ ಪ್ರತ್ಯೇಕ ಹಾಗೂ ವಿಭಿನ್ನವಾದುದು. ಈ ಪ್ರಕರಣದಲ್ಲಿ ₹41 ಲಕ್ಷ ಪತ್ತೆಯಾಗಿದೆ. ಹೀಗಾಗಿ, ಪ್ರಕರಣವನ್ನು ರದ್ದುಗೊಳಿಸಲಾಗದು’ ಎಂದು ಸ್ಪಷ್ಟಪಡಿಸಿತು.  

ವಿಚಾರಣೆಯ ಆರಂಭದಲ್ಲಿ ನ್ಯಾಯಪೀಠವು, ‘ರಾಜ್ಯ ಸರ್ಕಾರ ನೀಡಿರುವ ಪೂರ್ವಾನುಮತಿಯ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಲು ಹೇಗೆ ಸಾಧ್ಯ? ಈ ಬಗ್ಗೆ ನಾವೆಂದೂ ಕೇಳೇ ಇಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.