ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ‘ಮುಡಾ’ ಹಗರಣದ ವಿರುದ್ಧ ಸದನದ ಒಳಗೆ ಮಿತ್ರಪಕ್ಷ ಬಿಜೆಪಿ ಜೊತೆ ಸೇರಿ ಹೋರಾಟ ಮುಂದುವರಿಸುತ್ತೇವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣಗಳನ್ನು ಸಮರ್ಥಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲ. ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುವ ಜೊತೆಗೆ, ಕಾನೂನು ಹೋರಾಟಕ್ಕೂ ಜೆಡಿಎಸ್ ಕೈಜೋಡಿಸಲಿದೆ ಎಂದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆಗೆ ಪಕ್ಷ ಅಡ್ಡಿಪಡಿಸುವುದಿಲ್ಲ. ಅಶ್ಲೀಲ ದೃಶ್ಯಗಳಿರುವ ಪೆನ್ಡ್ರೈವ್ಗಳನ್ನು ಹಂಚಿದ್ದು ನವೀನ್ ಗೌಡ ಎನ್ನುವುದನ್ನು ಎಸ್ಐಟಿಯೇ ಹೇಳಿದೆ. ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಈ ಕುರಿತು ಹೆಚ್ಚು ಚರ್ಚೆ ನಡೆಸುವುದಿಲ್ಲ ಎಂದರು.
‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲ ಎಂದು ಜಿ.ಟಿ. ದೇವೇಗೌಡ ಅವರು ಮುನಿಸಿಕೊಂಡಿಲ್ಲ. ಅವರ ಜೊತೆ ಮಾತನಾಡಿರುವೆ. ಸಾಮಾಜಿಕ ನ್ಯಾಯ ಕೊಡಬೇಕು ಎಂದು ಪಕ್ಷದ ವರಿಷ್ಠರು ತಮ್ಮನ್ನು ನೇಮಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.