ನವದೆಹಲಿ: ‘ಕರ್ನಾಟಕದಲ್ಲಿ ವಾಲ್ಮೀಕಿ ನಿಗಮದ ಹಗರಣದ ಮಾದರಿಯಲ್ಲೇ ಬೇರೆ ನಿಗಮಗಳಲ್ಲೂ ಬಹುಕೋಟಿ ಹಗರಣಗಳು ನಡೆದಿವೆ' ಎಂದು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ.ನಾಗೇಂದ್ರ ಅವರು ಹಗರಣದಲ್ಲಿ ಸಣ್ಣ ಮೀನು. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು’ ಎಂದು ಆಗ್ರಹಿಸಿದರು.
‘ಬಡವರಿಗೆ ಶಿಕ್ಷಣ ನೀಡಲು, ಮನೆ ನಿರ್ಮಾಣ ಸೇರಿ ಅಭಿವೃದ್ಧಿಗಾಗಿ ನಿಗಮದಲ್ಲಿ ಹಣ ಇಡಲಾಗಿತ್ತು. ಆದರೆ, ಇದನ್ನು ತೆಲಂಗಾಣ ಚುನಾವಣೆ ಬಳಕೆಗೆ ಮಾಡಿಕೊಂಡ ಅನುಮಾನ ಇದೆ. ಹೈದರಾಬಾದ್ನಲ್ಲಿರುವ ಬಾರ್, ಟೆಂಟ್ ಹೌಸ್ ಹಾಗೂ ಖಾಸಗಿ ಬ್ಯಾಂಕ್ಗೆ ನಿಗಮದ ಹಣ ಜಮೆಯಾಗಿದೆ. ಹಗರಣ ಮುಚ್ಚಿ ಹಾಕಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ. ಕಡತಗಳನ್ನು ನೀಡದೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.